ಬೆಂಗಳೂರು: ಸಿ.ಡಿ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಯುವತಿ ಗುರುವಾರ ಎರಡನೇ ವಿಡಿಯೊ ಹರಿಯ ಬಿಟ್ಟಿದ್ದು, ಎಸ್ಐಟಿ ವಿರುದ್ಧ ಹರಿಹಾಯ್ದಿದ್ದಾರೆ. ಏತನ್ಮಧ್ಯೆ, ಪ್ರಕರಣಕ್ಕೆ ಮಹತ್ವದ ಪುರಾವೆಯಾದ ಮೂಲ ವಿಡಿಯೊವನ್ನು ತನಿಖಾ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಈ ಬೆಳವಣಿಗೆಯ ಮಧ್ಯೆಯೇ, ‘ತನಗೆ ಯುವತಿಯ ಪರಿಚಯವೇ ಇಲ್ಲ’ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರ ಮೊಬೈಲ್ ಫೋನ್ ಜಪ್ತಿ ಮಾಡಿರುವ ಅಧಿಕಾರಿಗಳು ತನಿಖೆಗೆ ಮತ್ತೊಂದು ಆಯಾಮವನ್ನು ನೀಡಿದ್ದಾರೆ.
‘ನನಗೆ ರಕ್ಷಣೆ ನೀಡಿ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಉದ್ದೇಶಿಸಿ ಮನವಿ ಮಾಡಿರುವ ವಿಡಿಯೊ ಹರಿಬಿಟ್ಟಿದ್ದ ಯುವತಿ, ಇದೀಗ 1 ನಿಮಿಷ 13 ಸೆಕೆಂಡ್ಗಳ ಮತ್ತೊಂದು ವಿಡಿಯೊವನ್ನು ಮಾಧ್ಯಮಗಳಿಗೆ ತಲುಪಿಸಿದ್ದಾರೆ. ಹೊಸ ವಿಡಿಯೊದಲ್ಲಿ ಯುವತಿ ಪ್ರಸ್ತಾಪಿಸಿರುವ ವಿಷಯ, ವಿಚಾರಣೆಗೆ ಮತ್ತೊಂದು ತಿರುವು ನೀಡುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
ಪೊಲೀಸ್ ಕಮಿಷನರ್ಗೆ ಕಳುಹಿಸಿರುವ ವಿಡಿಯೊ ಸೋರಿಕೆಯಾಗಿರುವ ಬಗ್ಗೆ ಯುವತಿ ವ್ಯಕ್ತಪಡಿಸಿರುವ ಸಂದೇಹ ಚರ್ಚೆಗೂ ಗ್ರಾಸವಾಗಿದೆ.
ವಿಡಿಯೊದಲ್ಲಿ ಹೇಳಿದ್ದೇನು?: ‘ನ್ಯಾಯ ಕೇಳಿ ಒಂದು ವಿಡಿಯೊ ಮಾಡಿದ್ದೆ. ಪೊಲೀಸ್ ಕಮಿಷನರ್ ಕಚೇರಿ ಹಾಗೂ ಎಸ್ಐಟಿಯವರಿಗೆ ಮಾರ್ಚ್ 12ರಂದು ತಲುಪಿಸಿದ್ದೆ. ಮರುದಿನ ಮಾ. 13ರಂದು ತರಾತುರಿಯಲ್ಲಿ ರಮೇಶ ಜಾರಕಿಹೊಳಿ ದೂರು ಕೊಟ್ಟಿದ್ದಾರೆ. ಅದಾಗಿ ಅರ್ಧ ಗಂಟೆಗೆ ನನ್ನ ವಿಡಿಯೊ ಹೊರಗೆ ಬಿಡಲಾಗಿದೆ. ಹಾಗಾದರೆ, ಎಸ್ಐಟಿ ಯಾರ ಪರವಿದೆ ? ಯಾರನ್ನು ರಕ್ಷಣೆ ಮಾಡುತ್ತಿದೆ’ ಎಂದು ಯುವತಿ ಪ್ರಶ್ನಿಸಿದ್ದಾರೆ.
‘ನನ್ನನ್ನು ಅಪಹರಣ ಮಾಡಲಾಗಿದೆ ಎಂದು ಅಪ್ಪ–ಅಮ್ಮ ಸ್ವ–ಇಚ್ಛೆಯಿಂದ ದೂರು ಕೊಟ್ಟಿರುವುದಕ್ಕೆ ಸಾಧ್ಯವೇ ಇಲ್ಲ. ಅವರಿಗೆ, ಮಗಳು ಯಾವುದೇ ತಪ್ಪು ಮಾಡಿಲ್ಲವೆಂಬುದು ಗೊತ್ತು. ಅಪ್ಪ–ಅಮ್ಮನಿಗೆ ರಕ್ಷಣೆ ನೀಡಬೇಕು. ಅವರು ಸುರಕ್ಷಿತವಾಗಿದ್ದಾರೆ ಎಂಬುದು ಯಾವಾಗ ಗೊತ್ತಾಗುತ್ತದೆಯೋ ಅವಾಗಲೇ ಎಸ್ಐಟಿ ಮುಂದೆ ಹಾಜರಾಗುವೆ’ ಎಂದೂ ಯುವತಿ ಹೇಳಿದ್ದಾರೆ.
‘ಅಪ್ಪ–ಅಮ್ಮನಿಗೆ ಭದ್ರತೆ ಕೊಡಿ ಎಂದುಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ರಮೇಶ್ ಕುಮಾರ್ ಅವರಿಗೆ ಹಾಗೂ ಇನ್ನಿತರ ಮಹಿಳಾ ಸಂಘಟನೆಗಳಿಗೆ ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ.
ಮೂಲ ವಿಡಿಯೊ ಪತ್ತೆ: 'ವ್ಯಾನಿಟಿ ಬ್ಯಾಗ್ನಲ್ಲಿ ಕ್ಯಾಮೆರಾ ಇಟ್ಟು ವಿಡಿಯೊ ಚಿತ್ರೀಕರಣ ಮಾಡಲಾಗಿದ್ದು, ಎಲ್ಲರ ಮುಖ ಸ್ಪಷ್ಟವಾಗಿ ದಾಖಲಾಗಿದೆ. ಈ ಮೂಲ ವಿಡಿಯೊ ಸಿಕ್ಕಿದ್ದು, ಮೇಲ್ನೋಟಕ್ಕೆ ಅಸಲಿಯಂತೆ ಕಾಣುತ್ತಿದೆ. ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಎಸ್ಐಟಿ ಮೂಲಗಳು ಹೇಳಿವೆ.
ಮೊಬೈಲ್ ಸಹ ಜಪ್ತಿ: ’ಯುವತಿ ಯಾರು ಎಂಬುದು ಗೊತ್ತಿಲ್ಲ. ಆಕೆಯ ಜೊತೆ ವಾಟ್ಸ್ಆ್ಯಪ್ ಚಾಟಿಂಗ್ ಸಹ ಮಾಡಿಲ್ಲ’ ಎಂದು ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದರು.
ಅಧಿಕಾರಿಗಳು ಪರ್ಯಾಯ ಪ್ರಶ್ನೆ ಕೇಳಿದಾಗ, ‘ನನ್ನ ವಕೀಲರನ್ನು ಕೇಳಿ ತಿಳಿಸುವೆ’ ಎಂದಷ್ಟೇ ರಮೇಶ ಹೇಳಿದ್ದರು. ಆದರೆ, ವಾಟ್ಸ್ಆ್ಯಪ್ ಚಾಟಿಂಗ್ ಚಿತ್ರ ಹಾಗೂ ವಿಡಿಯೊ ಕರೆಗಳ ದೃಶ್ಯ ಎಲ್ಲೆಡೆ ಹರಿದಾಡುತ್ತಿವೆ. ಹೀಗಾಗಿ, ರಮೇಶ್ ಅವರ ಮೊಬೈಲ್ ವಶಕ್ಕೆ ಪಡೆದಿರುವ ಎಸ್ಐಟಿ ಅಧಿಕಾರಿಗಳು, ಪರೀಕ್ಷೆಗಾಗಿ ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಎಸ್ಐಟಿ ಯಾರ ಪರ–ವಿರುದ್ಧವೂ ಅಲ್ಲ: ಬೊಮ್ಮಾಯಿ
‘ಸಿ.ಡಿ ಪ್ರಕರಣದಲ್ಲಿ ಎಸ್ಐಟಿ ತನಿಖೆ ಯಾರ ಪರವೂ ಅಲ್ಲ. ಯಾರ ವಿರುದ್ಧವೂ ಇಲ್ಲ. ಸತ್ಯ ಹೊರಗೆ ಬರಬೇಕಿದೆ. ತನಿಖೆಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
‘ತನಿಖೆಯ ಸಂದರ್ಭದಲ್ಲಿ ಹಲವು ಬೆಳವಣಿಗೆಗಳು, ತಿರುವುಗಳು ನಡೆಯುತ್ತವೆ. ಅವನ್ನೆಲ್ಲ ಸಕಾರಾತ್ಮಕವಾಗಿ ತೆಗೆದುಕೊಂಡು ನಿಷ್ಪಕ್ಷಪಾತವಾಗಿ ಎಸ್ಐಟಿ ತನಿಖೆ ನಡೆಸಲಿದೆ’ ಎಂದರು.
‘ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂಬ ಕಾರಣಕ್ಕೆ ರಮೇಶ ಜಾರಕಿಹೊಳಿ ಅವರನ್ನೂ ವಿಚಾರಣೆ ನಡೆಸಲಾಗಿದೆ. ಆ ಯುವತಿಯ ಹೇಳಿಕೆ ಪಡೆಯಲು ಸಿದ್ಧರಿದ್ದೇವೆ ಎಂದು ಎಸ್ಐಟಿ ಅಧಿಕಾರಿಗಳು ಹೇಳಿದ್ದಾರೆ. ಯುವತಿ ಎಲ್ಲಿದ್ದಾರೆ ಎಂದು ಹೇಳಿದರೆ ಅಲ್ಲಿಗೇ ಮಹಿಳಾ ಪೊಲೀಸರ ಕಳುಹಿಸಿ ರಕ್ಷಣೆ ಕೊಡುತ್ತೇವೆ. ಪೊಲೀಸರ ರಕ್ಷಣೆಯಲ್ಲಿ ಆಕೆ ಹೇಳಿಕೆ ಕೊಡಬಹುದು’ ಎಂದರು.
ಯುವತಿಗೆ ರಕ್ಷಣೆ ನಮ್ಮ ಹೊಣೆ: ಜೊಲ್ಲೆ
‘ಸಿ.ಡಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಯುವತಿಗೆ ರಕ್ಷಣೆ ನೀಡಲು ನಾವು ಹಿಂದೇಟು ಹಾಕುವುದಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
‘ಆ ಯುವತಿ ಹೊಸ ವಿಡಿಯೊದಲ್ಲಿ ಏನು ಹೇಳಿದ್ದಾರೆ ಎನ್ನುವುದನ್ನು ನೋಡಿಲ್ಲ. ನಮ್ಮ ಸರ್ಕಾರ ಆ ಯುವತಿಗೆ ರಕ್ಷಣೆ ನೀಡಲಿದೆ ಎಂದು ಸದನದಲ್ಲಿ ಸ್ವತಃ ಮುಖ್ಯಮಂತ್ರಿ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ’ ಎಂದರು.
‘ಆಕೆಗೆ ಅನ್ಯಾಯ ಆಗಿದೆಯೇ, ಇಲ್ಲವೇ ಎನ್ನುವುದು ಎಸ್ಐಟಿ ತನಿಖೆ ಬಳಿಕ ಗೊತ್ತಾಗುತ್ತದೆ. ತನಿಖೆಯ ವರದಿ ಏನೇ ಬರಲಿ, ನನ್ನ ಇಲಾಖೆಯಿಂದ ಆಕೆ ರಕ್ಷಣೆ ಕೇಳಿದರೆ, ಕೊಡಲು ಸಿದ್ಧ’ ಎಂದು ಅವರು ಹೇಳಿದರು.
ಎಸ್ಐಟಿ ಅಧಿಕಾರಿಗಳ ಸಭೆ
ಯುವತಿ ವಿಡಿಯೊ ಬಿಡುಗಡೆ ಮಾಡುತ್ತಿದ್ದಂತೆ ಎಸ್ಐಟಿ ಅಧಿಕಾರಿಗಳು ನಗರ ಕಮಿಷನರ್ ಕಚೇರಿಯಲ್ಲಿ ಗುರುವಾರ ಸಭೆ ನಡೆಸಿದರು.
ಎಸ್ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ, ‘ಪ್ರಕರಣ ಗಮನಕ್ಕೆ ಬಂದು 23 ದಿನವಾದರೂ ಯುವತಿಯನ್ನು ಪತ್ತೆ ಹಚ್ಚಲು ಆಗಿಲ್ಲವೇಕೆ? ಪ್ರಕರಣದ ಹಿಂದೆ ಯಾರಿದ್ದಾರೆ ಎಂಬುದನ್ನು ತಿಳಿಯಲು ಕಷ್ಟವೇ? ಯುವತಿ ಎರಡನೇ ವಿಡಿಯೊ ಹರಿಬಿಟ್ಟಿದ್ದು, ಅದು ಬಂದಿದ್ದು ಎಲ್ಲಿಂದ’ ಎಂಬುದಾಗಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆಂದು ಗೊತ್ತಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.