ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸರ್ಕಾರ ಸಜ್ಜಾಗಿದೆ: ಸಚಿವ ಸುರೇಶ್ ಕುಮಾರ್

ಪರೀಕ್ಷಾ ಕೊಠಡಿಯಲ್ಲಿ ಈ ಬಾರಿ ಗರಿಷ್ಠ 18ರಿಂದ 20 ಮಕ್ಕಳಿಗೆ ಅವಕಾಶ
Last Updated 8 ಏಪ್ರಿಲ್ 2021, 11:46 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್ ಪರಿಸ್ಥಿತಿಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಎಲ್ಲ ಇಲಾಖೆಗಳು, ಸಂಘಸಂಸ್ಥೆಗಳ ಸಹಕಾರ ಮತ್ತು ಸಮನ್ವಯದೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸರ್ಕಾರ ಎಲ್ಲ ರೀತಿಯಲ್ಲಿ ಸಜ್ಜಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.

ಬೆಂಗಳೂರು ಉತ್ತರ, ದಕ್ಷಿಣ ಮತ್ತು ಗ್ರಾಮಾಂತರ ಜಿಲ್ಲೆಗಳ ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಎಸ್ಸೆಸ್ಸೆಲ್ಸಿ ಪಾಠ ಪ್ರವಚನಗಳ ಪ್ರಗತಿ ಮತ್ತು ಪರೀಕ್ಷಾ ಸಿದ್ಧತೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ‘ಯಾವುದೇ ವಿದ್ಯಾರ್ಥಿ ಪರೀಕ್ಷೆಗೆ ಗೈರು ಹಾಜರಾಗದಂತೆ ಕ್ರಮ ವಹಿಸಬೇಕು. ಶಿಕ್ಷಕರು ಅಥವಾ ಅಧಿಕಾರಿಗಳು ಇದೊಂದು ಸರ್ಕಾರಿ ಆದೇಶ ಎಂದು ತಿಳಿದುಕೊಳ್ಳುವುದಕ್ಕಿಂತ ಸ್ವಯಂಪ್ರೇರಣೆಯಿಂದ ಮಕ್ಕಳ ಪ್ರೇರೇಪಣೆಗೆ ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಪರೀಕ್ಷಾ ಕೊಠಡಿಯಲ್ಲಿ ಈ ಬಾರಿ ಗರಿಷ್ಠ 18ರಿಂದ 20 ಮಕ್ಕಳಷ್ಟೇ ಇರಬೇಕು. ಪ್ರತಿ ಪರೀಕ್ಷಾ ಕೊಠಡಿಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮಂಡಳಿಯಿಂದಲೇ ಪ್ರತ್ಯೇಕ ಪ್ರಶ್ನೆ ಪತ್ರಿಕೆ ಬಂಡಲ್‌ಗಳನ್ನು ಮಾಡಿ ರವಾನಿಸಲು ಪರಿಶೀಲಿಸಲಾಗುತ್ತಿದೆ. ಈ ಬಾರಿ ಮಳೆಗಾಲದಲ್ಲಿ ಪರೀಕ್ಷೆ ಬರುತ್ತಿರುವುದರಿಂದ ಮಳೆ ನೀರಿನ ಇರುಚಲಿನಿಂದಾಗಲೀ, ಇಲ್ಲವೇ ಕೊಠಡಿಯ ಮೇಲ್ಛಾವಣಿಯ ತುಣುಕುಗಳ ಬಿದ್ದು ಪರೀಕ್ಷಾ ಕೊಠಡಿ ವಿದ್ಯಾರ್ಥಿಗಳಿಗೆ ಕಿರಿಕಿರಿ ಆಗುವಂತಿರಬಾರದು. ಸಣ್ಣಪುಟ್ಟ ವಿಷಯಗಳತ್ತಲೂ ಗಮನಹರಿಸಿ ಪರೀಕ್ಷೆಗಳು ಯಶಸ್ವಿಯಾಗುವಂತೆ ಗಮನಹರಿಸಬೇಕು. ಪರೀಕ್ಷಾ ಕೇಂದ್ರದಲ್ಲಿ ಸ್ವಚ್ಛತೆಗೆ ಆದ್ಯತೆ, ಶೌಚಾಲಯಗಳು, ನೀರಿನ ವ್ಯವಸ್ಥೆ, ಮಾಸ್ಕ್, ಸೋಪಿನ ವ್ಯವಸ್ಥೆ ಕುರಿತು ಗಮನಹರಿಸಬೇಕು’ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

‘ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನಿಗದಿಪಡಿಸಿದ್ದ ಪಠ್ಯಕ್ರಮದ ಪಾಠ ಪ್ರವಚನಗಳು ಮುಗಿದು ಪುನರಾವರ್ತನೆಯ ಹಂತದಲ್ಲಿರುವ ಈ ಸಮಯದಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಪ್ರೇರೇಪಣೆಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಪರೀಕ್ಷೆಗೆ ನೊಂದಣಿ ಮಾಡಿಸಿರುವ ಯಾವುದೇ ವಿದ್ಯಾರ್ಥಿಯೂ ಗೈರು ಹಾಜರಾಗದಂತೆ ಕ್ರಮ ವಹಿಸಬೇಕು’ ಎಂದರು.

‘ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಸಂಖ್ಯಾತ್ಮಕವಾಗಿರುವುದಕ್ಕಿಂತ ಗುಣಾತ್ಮಕವಾಗಿರುವಂತೆ ಮತ್ತು ಪರೀಕ್ಷಾ ಪಾವಿತ್ರ್ಯತೆ ಕಾಪಾಡಲು ಪ್ರಥಮ ಆದ್ಯತೆ ನೀಡಬೇಕು. ಪರೀಕ್ಷೆ ಕುರಿತಂತೆ ಬಿಗಿಯಾದ ಮೇಲ್ವಿಚಾರಣೆ ನಡೆಸಬೇಕು. ಪರೀಕ್ಷೆಯಲ್ಲಿ ಸಲ್ಲದ ವಿಷಯಗಳಿಗೆ ಆದ್ಯತೆ ನೀಡಿದ್ದು ಕಂಡುಬಂದರೆ, ಸಂಬಂಧಿಸಿದ ಡಿಡಿಪಿಐ ಹಾಗೂ ಬಿಇಒಗಳನ್ನೇ ಹೊಣೆಗಾರರನ್ನಾಗಿ ಮಾಡಿ ಅಗತ್ಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದೂ ಎಚ್ಚರಿಕೆ ನೀಡಿದರು.

‘ತಾಲ್ಲೂಕು ಇಲ್ಲವೇ ಹೋಬಳಿ ಮಟ್ಟದಲ್ಲಿ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಸಭೆಗಳನ್ನು ನಡೆಸಿ ಪರೀಕ್ಷಾ ಪಾವಿತ್ರ್ಯತೆ ಕಾಪಾಡುವುದು ಸೇರಿದಂತೆ ವಿದ್ಯಾರ್ಥಿಗಳ ಅಭ್ಯಾಸದ ಪ್ರಗತಿ, ವಿದ್ಯಾರ್ಥಿಗಳನ್ನು ಪರೀಕ್ಷೆಯತ್ತ ಪ್ರೇರೇಪಣೆಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಮಾಹಿತಿ ನೀಡಬೇಕು. ಪರೀಕ್ಷೆಗೆ ನೊಂದಣಿ ಮಾಡಿಸಿಯೂ ಸಹ ತರಗತಿಗೆ ಹಾಜರಾಗದಿರುವ ವಿದ್ಯಾರ್ಥಿಗಳ ಕುರಿತು ಮಾಹಿತಿ ಸಂಗ್ರಹಿಸಿ ಅವರು ಪರೀಕ್ಷೆಗೆ ಹಾಜರಾಗುವಂತೆ ಗಮನಹರಿಸಬೇಕು. ಈ ಬಾರಿ ತರಗತಿ ಹಾಜರಿ ಕಡ್ಡಾಯವಲ್ಲ. ಹೀಗಾಗಿ, ತರಗತಿಗೆ ಹಾಜರಾಗದಿರುವ ಮಕ್ಕಳು ಎಲ್ಲಿದ್ದಾರೆ, ಪರೀಕ್ಷೆಗೆ ಹಾಜರಿ ಕುರಿತ ಅವರ ಭಾವನೆಗಳನ್ನು ಅರಿತು ಪರೀಕ್ಷೆಗೆ ಹಾಜರಾಗುವಂತೆ ಮನವೊಲಿಕೆ ಮತ್ತು ಪಠ್ಯಗಳ ಕುರಿತು ಸಲಹೆ ಸೂಚನೆ ನೀಡಲು ಶಾಲಾ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಗಮನಹರಿಸಬೇಕು’ ಎಂದು ಸುರೇಶ್ ಕುಮಾರ್ ಹೇಳಿದರು.

‘ಕೆಲವು ಶಾಲೆಗಳಲ್ಲಿ ಪಠ್ಯಕ್ರಮ ಮುಗಿದು ಪುನರಾವರ್ತನೆ ಹಂತದಲ್ಲಿದ್ದರೆ, ಕೆಲವು ಶಾಲೆಗಳಲ್ಲಿ ಕೆಲವು ವಿಷಯಗಳಲ್ಲಿ ಒಂದೆರಡು ಪಠ್ಯಗಳು ಬಾಕಿ ಇವೆ ಎಂಬ ಮಾಹಿತಿಯಿದೆ. ಸರ್ಕಾರಿ ಶಾಲೆಗಳಲ್ಲಿ ಯಾವುದೇ ವಿಷಯದ ಶಿಕ್ಷಕರ ಕೊರತೆಯಿದ್ದರೆ ಅಕ್ಕಪಕ್ಕದ ಶಾಲೆಗಳ ಶಿಕ್ಷಕರನ್ನು ಆ ಶಾಲೆಗಳಿಗೆ ನಿಯೋಜಿಸುವ ಮೂಲಕ ಪಠ್ಯಕ್ರಮ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದರು.

‘ಈಗಾಗಲೇ ತರಗತಿಯಿಂದ ದೂರ ಇರುವ ಮಕ್ಕಳು ಯಾವ ಕಾರಣದಿಂದ ದೂರವಿದ್ದಾರೆ ಎಂಬ ಕುರಿತು ಕರೆ ಮಾಡಿ ಸಂಪರ್ಕಿಸಿ ಪರೀಕ್ಷೆ ಸಿದ್ಧತೆ ಕುರಿತು ಕೌನ್ಸೆಲಿಂಗ್ ಮಾಡಬೇಕು. ಈ ಕುರಿತು ಪ್ರತಿ ವಿದ್ಯಾರ್ಥಿಕುರಿತು ಶಿಕ್ಷಕರು ವೈಯಕ್ತಿಕ ಗಮನಹರಿಸಬೇಕು. ಈಗಿನಿಂದಲೇ ಸ್ಕೌಟ್ಸ್-ಗೈಡ್ಸ್, ರೆಡ್ ಕ್ರಾಸ್, ಎನ್‌ಸಿಸಿ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸಹಕಾರ ಪಡೆಯಬೇಕು. ಕಳೆದ ಬಾರಿ ಶೈಕ್ಷಣಿಕ ವರ್ಷ ಮುಗಿದು ಪರೀಕ್ಷೆ ನಡೆಯುವ ಸಮಯಕ್ಕೆ 3–4 ತಿಂಗಳಷ್ಟು ಅವಧಿಯ ಅಂತರವಿತ್ತು. ಈ ಬಾರಿ ಅಂಥ ಸುರ್ದೀಘ ಅಂತರವೇನೂ ಇರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಓದಿದ್ದು ಮರೆತು ಹೋಗುವಂಥ ಪ್ರಸಂಗವೂ ಇರುವುದಿಲ್ಲವಾದ್ದರಿಂದ ಮಕ್ಕಳು ಯಾವ ವಿಷಯದಲ್ಲಿ ಹಿಂದುಳಿಯುತ್ತಿದ್ದಾರೆ ಎಂಬುದನ್ನು ಈಗಿನಿಂದಲೇ ಅವರತ್ತ ವಿಶೇಷ ಗಮನ ಹರಿಸಿ ಉತ್ತಮ ಅಂಕಗಳನ್ನು ಪಡೆಯುವಂತೆ ಪ್ರೇರೇಪಣೆ ಮಾಡಬೇಕು’ ಎಂದು ಸಚಿವರು ಸೂಚಿಸಿದರು.

‘ಎಸ್ಸೆಸ್ಸೆಲ್ಸಿ ಪಠ್ಯಕ್ರಮ ಮತ್ತು ಪರೀಕ್ಷೆ ಕುರಿತಂತೆ ಪರಿಶೀಲಿಸಲು ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದು, ಇದೇ ವಾರ ಬೆಳಗಾವಿ ವಿಭಾಗ ವ್ಯಾಪ್ತಿಯ 4 ಜಿಲ್ಲೆಗಳ ಪರಿಶೀಲನೆ ಮಾಡಿದ್ದೇನೆ. ಎಲ್ಲ ಕಡೆಯೂ ಪಠ್ಯ ಕ್ರಮ ಪುನರಾವರ್ತನೆ ಹಂತದಲ್ಲಿದ್ದು, ಆಯಾ ಭಾಗದ ಶಿಕ್ಷಕರು ವಿದ್ಯಾರ್ಥಿಗಳ ಮನೆಗೆ ಹೋಗಿ ಪರೀಕ್ಷೆಯ ಮಹತ್ವ ಕುರಿತು ವಿವರಿಸುವುದು ಸೇರಿದಂತೆ ತಮ್ಮದೇ ಆದ ರೀತಿಯ ವಿದ್ಯಾರ್ಥಿ ಸಂಪರ್ಕದ ಮೂಲಕ ಅವರು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಪ್ರೇರಣೆಗೊಳಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಮುಖ್ಯೋಪಾಧ್ಯಾಯರು ತಾಯಂದಿರ ಸಭೆ ಕರೆದು ಪರೀಕ್ಷೆಯ ಮಹತ್ವವನ್ನು ವಿವರಿಸಿದ್ದಾರೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT