ನಿಷೇಧಾಜ್ಞೆ ಇದ್ದರೂ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು 2 ತಂಡಗಳಾಗಿ ಪ್ರತ್ಯೇಕವಾಗಿ ಬರುತ್ತಿದ್ದ ಸಾವಿರಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–4ರಲ್ಲೇ ತಡೆದು ವಶಕ್ಕೆ ಪಡೆದರು. ಈ ವೇಳೆ, ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನೂಕಾಟ ಉಂಟಾಯಿತು. ಕಾರ್ಯಕರ್ತೆಯರು ಸೇರಿದಂತೆ ಕೆಲವರು ಪೊಲೀಸ್ ವಾಹನದ ಮೇಲೇರಿ, ಎಂಇಎಸ್ ವಿರುದ್ಧ ಘೋಷಣೆ ಕೂಗಿದರು. ಕೆಲವರು ಲಾರಿ ಕೆಳಗೆ ಮಲಗಿ ಪ್ರತಿಭಟಿಸಿದರು. ಇನ್ನೂ ಕೆಲವರು, ಮಹಾರಾಷ್ಟ್ರ ನೋಂದಣಿಯ ವಾಹನದ ಮೇಲೆ ದಾಳಿ ಮಾಡಲು ಯತ್ನಿಸಿದರು. ಆದರೆ, ಪೊಲೀಸರು ಅವಕಾಶ ಕೊಡಲಿಲ್ಲ.