ಹುಬ್ಬಳ್ಳಿ: ‘ಕಾವೇರಿ ನದಿಯಿಂದ ತಮಿಳುನಾಡಿಗೆ ಬಿಡಬೇಕಾದ ನೀರಿನ ಪ್ರಮಾಣದಲ್ಲಿ ಪ್ರಸ್ತುತ ವರ್ಷ 27.987 ಟಿಎಂಸಿ ಅಡಿ ನೀರು ಕಡಿಮೆಯಾಗಿದೆ. ಜಲಾಶಯಗಳಲ್ಲಿನ ನೀರು ಎಷ್ಟಿದೆ ಎಂಬುದನ್ನು ಆಧರಿಸಿ ನೀರು ಹರಿಸಲಾಗುವುದು’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆ ಅನುಷ್ಠಾನ ಮಾಡುತ್ತಿದ್ದೇವೆಯೇ ಹೊರತು ಕೃಷಿ ಉದ್ದೇಶಕ್ಕಾಗಿ ಅಲ್ಲ. ತಮಿಳುನಾಡು ಈ ಯೋಜನೆಗೆ ವಿನಾ ಕಾರಣ ಅಡ್ಡಿಪಡಿಸುತ್ತಿದೆ’ ಎಂದು ಆರೋಪಿಸಿದರು.
‘ಮೇಕೆದಾಟು ಯೋಜನೆಗೆ ನಮ್ಮ ರಾಜ್ಯದ ಪಾಲು ಮಾತ್ರ ಬಳಸಿಕೊಳ್ಳುತ್ತಿದ್ದೇವೆ. ಈ ಕುರಿತು ಎರಡೂ ರಾಜ್ಯಗಳು ಸುಪ್ರೀಂ ಕೋರ್ಟ್ಲ್ಲಿ ಪಿಐಎಲ್ ಹಾಕಿವೆ. ನಮ್ಮ ಕಾನೂನು ತಜ್ಞರ ತಂಡ ವಾದ ಮಂಡಿಸಿ, ಶೀಘ್ರ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಲಿದೆ’ ಎಂದು ಹೇಳಿದರು.