ಚಿಕ್ಕಬಳ್ಳಾಪುರ:‘ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರಿಗೆ ಬೆಂಬಲ ಕೊಡಬೇಕು ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸುತ್ತೇವೆ’ ಎಂದುಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಷತ್ ಚುನಾವಣೆಯ ಆರು ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಿದೆ. ಉಳಿದ ಕ್ಷೇತ್ರಗಳಲ್ಲಿ ಯಾವ ಪಕ್ಷವನ್ನು ಗೆಲ್ಲಿಸಬೇಕು ಎನ್ನುವ ನಿರ್ಣಾಯಕ ಪಾತ್ರ ವಹಿಸುವ ಶಕ್ತಿ ಜೆಡಿಎಸ್ಗೆ ಇದೆ ಎಂದರು.
‘ಕಾಂಗ್ರೆಸ್ ಮತ್ತು ಬಿಜೆಪಿ ಸಖ್ಯ ಮಾಡಿಯೇ ನಾವು ಹಾಳಾಗಿದ್ದೇವೆ. ನಮಗೆ ಯಾರ ಸಹವಾಸವೂ ಬೇಡ. 2023ರ ವಿಧಾನಸಭಾ ಚುನಾವಣೆಯಲ್ಲಿ 123 ಸ್ಥಾನ ಗೆಲ್ಲಬೇಕು ಎನ್ನುವುದು ನಮ್ಮ ಗುರಿ. ಆ ಆಧಾರದಲ್ಲಿ ಎಲ್ಲಿ ಯಾವ ತೀರ್ಮಾನಗಳನ್ನು ಕೈಗೊಳ್ಳಬೇಕೊ ಆ ರೀತಿಯಲ್ಲಿ ತೀರ್ಮಾನಗಳನ್ನು ಕೈಗೊಳ್ಳುತ್ತೇವೆ’ ಎಂದು ಹೇಳಿದರು
‘ಅಭಿವೃದ್ಧಿಯಿಂದಲೇಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಬಿಜೆಪಿಯವರು ಆಪರೇಷನ್ ಕಮಲ ಮಾಡಿ ಗೆಲುವು ಸಾಧಿಸಿದರು. ಸಿಂದಗಿ ಉಪ ಚುನಾವಣೆಯ ವೇಳೆ ದೇವೇಗೌಡರು ನೀರಾವರಿ ವ್ಯವಸ್ಥೆ ಮಾಡಿದ್ದರಿಂದಲೇ ಅನ್ನ ತಿನ್ನುತ್ತಿದ್ದೇವೆ ಎಂದು ಅಲ್ಲಿನ ಜನರು ಹೇಳಿದರು. ಆ ಕ್ಷೇತ್ರದ 22 ಸಾವಿರ ಕುಟುಂಬಗಳ ಸಾಲ ಮನ್ನಾ ಮಾಡಿದ್ದೇನೆ. ಹೀಗಿದ್ದರೂ ನಮ್ಮ ಪಕ್ಷದ ಅಭ್ಯರ್ಥಿ ಪಡೆದಿದ್ದು 4 ಸಾವಿರ ಮತಗಳು’ ಎಂದು ಹೇಳಿದರು.
‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಳೆಯಿಂದ 5 ಲಕ್ಷ ಹೆಕ್ಟೇರ್ ಬೆಳೆ ಹಾನಿ ಆಗಿದೆ ಎಂದರೆ, ಕೃಷಿ ಸಚಿವರು 10 ಲಕ್ಷ ಹೆಕ್ಟೇರ್ ಎನ್ನುತ್ತಾರೆ. ಇವರಿಬ್ಬರಿಗೆ ವರದಿ ಕೊಟ್ಟವರು ಯಾರು? ಸಚಿವರು ಮತ್ತು ಮುಖ್ಯಮಂತ್ರಿ ನಡುವೆ ಹೊಂದಾಣಿಕೆಯೇ ಇಲ್ಲ’ ಎಂದು ಟೀಕಿಸಿದರು.
‘ಮಳೆಯಿಂದ ರೈತರ ಬೆಳೆಗಳು ಹಾನಿಗೆ ಒಳಗಾಗಿವೆ.ರೈತರಿಗೆ ಹಣ ಕೊಡಬೇಕಾದರೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹೊಟ್ಟೆನೋವು ಬರುತ್ತದೆ. ಮಾರ್ಗಸೂಚಿ ನೆಪದಲ್ಲಿ ರೈತರ ಬದುಕನ್ನು ಹಾಳು ಮಾಡಬೇಡಿ ಎಂದು ಸರ್ಕಾರಕ್ಕೆ ಹೇಳುತ್ತೇನೆ’ ಎಂದರು.