ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯ ಚರ್ಚೆಗೆ ಬಿಜೆಪಿ ಪಟ್ಟು: ಕಲಾಪ ಮುಂದೂಡಿಕೆ

ವಿಧಾನ ಪರಿಷತ್‍
Last Updated 9 ಡಿಸೆಂಬರ್ 2020, 6:56 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಪರಿಷತ್‍ನಲ್ಲಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧ ನೀಡಲಾಗಿರುವ ಅವಿಶ್ವಾಸ ನಿರ್ಣಯದ ಚರ್ಚೆಗೆ ಬಿಜೆಪಿ ಸದಸ್ಯರು ಪಟ್ಟು ಹಿಡಿದ ಕಾರಣ ಬುಧವಾರ ಗದ್ದಲದ ವಾತಾವರಣ ನಿರ್ಮಾಣವಾಗಿ ಕಲಾಪವನ್ನು ಒಂದು ಗಂಟೆ ಕಾಲ ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಸಭಾಪತಿ ಅವರ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆಗೆ ಸೂಚನೆ ನೀಡಿತ್ತು. ಆದರೆ, ಅ ಕುರಿತು ಕಲಾಪ ಪಟ್ಟಿಯಲ್ಲಿ ಯಾವುದೇ ಮಾಹಿತಿ ಇರಲಿಲ್ಲ.

ಸಭಾಪತಿ ಅವರು ಶಾಸನ ರಚನೆ ಕಲಾಪವನ್ನು ಕೈಗೆತ್ತಿಕೊಂಡಾಗ ಬಿಜೆಪಿಯ ಸದಸ್ಯ ಆಯನೂರು ಮಂಜುನಾಥ್ ಎದ್ದು ನಿಂತು, 11 ಜನ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದೇವೆ, ಬುಧವಾರಕ್ಕೆ 14 ದಿನ ಆಗಿದೆ. ಅದನ್ನು ಕಲಾಪ ಪಟ್ಟಿಯಲ್ಲಿ ಸೇರಿಸಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಅದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಇತರೆ ಕಾಂಗ್ರೆಸ್ ಸದಸ್ಯರಾದ ನಾರಾಯಣಸ್ವಾಮಿ, ಹರಿಪ್ರಸಾದ್ ಮತ್ತಿತರರು, ಪರಿಷತ್‍ನ ಕಾರ್ಯಕಲಾಪಗಳ ನಿಯಮಾವಳಿಗಳ ಪ್ರಕಾರ 14 ದಿನ ತರುವಾಯ ನಿರ್ಣಯವನ್ನು ಕೈಗೆತ್ತಿಕೊಳ್ಳಬೇಕು ಎಂದಿದೆ. ಹೀಗಾಗಿ ಬಿಜೆಪಿ ನೋಟಿಸ್ ನೀಡಿರುವ ದಿನವನ್ನು ಲೆಕ್ಕ ಹಾಕಿದರೆ 14 ದಿನ ಇಂದು ಸಂಜೆಗೆ ಮುಗಿಯಲಿದೆ. ನಾಳೆ ಬೇಕಿದ್ದರೆ ಬಿಜೆಪಿಯವರು ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಬಹುದು ಎಂದರು.

ಆಗ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು, ನಿಯಮ 165 (2) ಪ್ರಕಾರ ಅವಿಶ್ವಾಸ ನಿರ್ಣಯವನ್ನು ಕಲಾಪ ನಡೆಯುವ 14 ದಿನಗಳ ನಂತರ ಅಥವಾ ಸಭಾಪತಿ ಅವರಿಗೆ ಯುಕ್ತವಾದ ದಿನದಂದು ನಿರ್ಣಯವನ್ನು ಕಲಾಪ ಪಟ್ಟಿಯಲ್ಲಿ ಸೇರಿಸಲು ಅವಕಾಶ ಇದೆ. ನೀವು ಕೊಟ್ಟಿರುವ ನೋಟಿಸ್‍ನಲ್ಲಿ ನನಗೆ ಕೆಲವು ಅನುಮಾನಗಳಿವೆ. ಆ ಬಗ್ಗೆ ನಾನು ಕಾನೂನು ತಜ್ಞರ ಸಲಹೆ ಪಡೆಯುತ್ತೇನೆ. ನಂತರ ಚರ್ಚೆಗೆ ಸಮಯ ನಿಗದಿ ಮಾಡುತ್ತೇನೆ ಎಂದು ಹೇಳಿದರು.

ಪಟ್ಟು ಸಡಿಲಿಸದ ಆಯನೂರು ಮಂಜುನಾಥ್ ಅವರು, ನಾವು ನವೆಂಬರ್ 25ನೇ ತಾರೀಖು ನೀಡಿದ್ದೇವೆ. 14 ದಿನ ಮುಗಿದಿದೆ ಎಂದು ವಾದಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಕಾಲಾವಧಿ ಮುಗಿದಿದೆ, ಚರ್ಚೆಗೆ ಅವಕಾಶ ನೀಡಿ ಎಂದು ಒತ್ತಾಯಿಸಿದಾಗ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಮಾತಿನಚಕಮಕಿ ನಡೆಯಿತು. ಎರಡು ಕಡೆಯ ಸದಸ್ಯರು ಪರಿಷತ್‍ನ ಕಾರ್ಯಕಲಾಪ ನಿಯಮಗಳನ್ನು ಉಲ್ಲೇಖಿಸಿ ತಮ್ಮದೇ ವಾದ ಮಂಡಿಸಿದರು. ಒಂದು ಹಂತದಲ್ಲಿ ಸದಸ್ಯರ ಮಾತುಗಳು ಕಡತಕ್ಕೆ ಹೋಗುವುದಿಲ್ಲ ಎಂದು ಸಭಾಪತಿ ಅವರು ರೂಲಿಂಗ್ ನೀಡಿದರು.

ಹೊರಗೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ. ಕೇವಲ ಅಧಿಕಾರ ಹಿಡಿಯುವುದಕ್ಕೆ ಬಿಜೆಪಿ ಒತ್ತು ನೀಡುತ್ತಿದೆ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತ ಪಡಿಸಿದರು. ಈ ವೇಳೆ ಜೆಡಿಎಸ್ ಸದಸ್ಯರು ಮೌನಕ್ಕೆ ಶರಣಾಗಿದ್ದರು.

ಈ ವೇಳೆ ಮಧ್ಯ ಪ್ರವೇಶಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ನಿಯಮದ ಪ್ರಕಾರ ಅವಿಶ್ವಾಸ ನಿರ್ಣಯದ ಚರ್ಚೆಗೆ ಸಮಯ ನಿಗದಿ ಮಾಡಬೇಕಿದೆ ಎಂದು ವಾದಿಸಿದರು. ಆಗ ಮತ್ತೊಮ್ಮೆ ಸ್ಪಷ್ಟನೆ ನೀಡಿದ ಸಭಾಪತಿ ಅವರು, ಈ ವಿಷಯದಲ್ಲಿ ಅನುಮಾನಗಳಿವೆ. ಕಾನೂನು ತಜ್ಞರ ಸಲಹೆ ಪಡೆಯದ ಹೊರತು ಚರ್ಚೆಗೆ ನಾನು ಸಮಯ ನಿಗದಿ ಮಾಡಲು ಸಾಧ್ಯವಿಲ್ಲ. ಆವರೆಗೂ ನೀವು ಯಾವುದೇ ಒತ್ತಡ ತಂದರು ಪ್ರಯೋಜನ ಇಲ್ಲ. ಇದು ನನ್ನ ಸ್ಪಷ್ಟ ಅಭಿಪ್ರಾಯ ಎಂದು ಹೇಳಿದರು.

ಆಗಲೂ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಗದ್ದಲ ಮುಂದುವರೆದಾಗ ಸಭಾಪತಿ ಅವರು ಕಲಾಪವನ್ನು ಒಂದು ಗಂಟೆ ಕಾಲ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT