ಯರಗಟ್ಟಿ: ಅಗತ್ಯ ನಾಗರಿಕ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಯರಗಟ್ಟಿ ಗ್ರಾಮ ಪಂಚಾಯ್ತಿ ಕಚೇರಿಗೆ ಕುಮಾನಮಡ್ಡಿ ನಿವಾಸಿಗಳು ಮಂಗಳವಾರ ಬೀಗ ಜಡಿದು ಪ್ರತಿಭಟಿಸಿದರು.
‘20 ವರ್ಷಗಳಿಂದ ಕುಮಾನಮಡ್ಡಿ ಕಾಲೊನಿಗೆ ಸೌಲಭ್ಯ ಕಲ್ಪಿಸಿಲ್ಲ. ಇದಕ್ಕೆ ಗ್ರಾಮ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಮತ್ತು ಶಾಸಕರಿಂದ ಯಾವುದೇ ಅನುದಾನ ಮಂಜೂರು ಆಗಿಲ್ಲ. ರಸ್ತೆ, ಚರಂಡಿ, ಶೌಚಾಲಯ, ನೀರು, ಅವಶ್ಯ ಇದೆ. ಹಲವಾರು ಸಲ ಗ್ರಾಮ ಪಂಚಾಯ್ತಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ನಾಗರಿಕರು ದೂರಿದರು.
ರಕ್ಷಣಾ ವೇದಿಕೆ ಅಧ್ಯಕ್ಷ ಡಿ. ಕೆ. ರಫಿಕ್ ಮಾತನಾಡಿ ‘ಕೊಳಚೆ ನೀರು, ನಿಂತ ನೀರಲ್ಲಿ ಮಲೇರಿಯಾ, ಕಾಲರಾ ಹರಡುವ ಸೊಳ್ಳೆಗಳ ಸೃಷ್ಟಿ, ರೋಗಕಾರಕ ಸನ್ನಿವೇಶಗಳಿಂದ ಜನ ಬೇಸತ್ತಿದ್ದಾರೆ. ಅಗತ್ಯ ಸೌಲಭ್ಯ ಒದಗಿಸಬೇಕು, ಇಲ್ಲದಿದ್ದರೆ ಚುನಾವಣೆ ಬಹಿಷ್ಕಾರ ಮಾಡಲಾಗುವುದು’ ಎಂದು ಎಚ್ಚರಿಸಿದರು.
ಪಿಡಿಒ ಎಸ್. ಜಿ. ಪೂಜೇರ ಮಾತನಾಡಿ ‘ಕುಮಾನಮಡ್ಡಿಗೆ ಸೌಲಭ್ಯ ಒದಗಿಸಲು ₹3 ಲಕ್ಷ ಮೀಸಲಿಡುತ್ತೇವೆ. ಹೈಟೆಕ್ ಶೌಚಾಲಯ ನಿರ್ಮಿಸಿಕೊಡಲಾಗುವುದು’ ಎಂದು ಭರವಸೆ ನೀಡಿದರು.