ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಭಾರಿ ಪ್ರತಿಭಟನೆ ನಡೆದ ಪ್ರದೇಶಗಳಿರುವ ಓಕ್ಲಾ ವಿಧಾನಸಭೆ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿ ಅಮಾನತ್ ಉಲ್ಲಾ ಖಾನ್ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ದೆಹಲಿಯ ಶಾಹೀನ್ ಬಾಗ್ ಮತ್ತು ಜಮಿಯಾ ನಗರ್ನಲ್ಲಿ ಸಿಎಎ ವಿರುದ್ಧ ಭಾರಿ ದೊಡ್ಡ ಹೋರಾಟಗಳು ನಡೆದಿದ್ದವು. ನಿತ್ಯವೂ ಅಲ್ಲಿ ಪ್ರತಿಭಟನೆಗಳು ನಡೆದಿವೆ. ಈ ಪ್ರದೇಶಗಳು ಓಕ್ಲಾ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿವೆ.
ಈ ಹಿಂದೆ ಎಎಪಿ ಅಭ್ಯರ್ಥಿ ಅಮಾನತ್ ಉಲ್ಲಾ ಖಾನ್ ಅವರು ಈ ಕ್ಷೇತ್ರದಿಂದ ಶಾಸಕರಾಗಿದ್ದರು. ಈ ಬಾರಿಯೂ ಎಎಪಿಯಿಂದ ಅವರೇ ಅಭ್ಯರ್ಥಿ. ಬಿಜೆಪಿಯಿಂದ ಭ್ರಹಂ ಸಿಂಗ್ ಅವರು ಸ್ಪರ್ಧಿಸಿದ್ದರು. ಆರಂಭಿಕ ಟ್ರೆಂಡ್ ಬಿಜೆಪಿ ಗೆಲ್ಲುವ ಮುನ್ಸೂಚನೆ ನೀಡಿತ್ತಾದರೂ, ನಂತರದಲ್ಲಿ ಅಮಾನತ್ ಉಲ್ಲಾ ಖಾನ್ ಅವರು ಮುನ್ನಡೆ ಸಾಧಿಸುವಲ್ಲಿ ಸಫಲರಾರು.
ಸದ್ಯ ಅಮಾನತ್ ಉಲ್ಲಾ ಖಾನ್ ಅವರು ಗೆಲುವಿನತ್ತ ದಾಪುಗಾಲಿಟ್ಟಿದ್ದು, 20 ಸಾವಿರಕ್ಕೂ ಹೆಚ್ಚು ಮತಗಳ ಅಂತರ ಹೊಂದಿದ್ದಾರೆ. ಖಾನ್ 28,470 ಮತಗಳನ್ನು ಪಡೆದಿದ್ದರೆ, ಭ್ರಹಂ ಸಿಂಗ್ ಅವರು ಕೇವಲ 7,296 ಮತ ಪಡೆದಿದ್ದಾರೆ.