ನವದೆಹಲಿ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ (ಎನ್ಸಿಪಿ) ಸಂಬಂಧಿಸಿದಂತೆ ಚುನಾವಣಾ ಆಯೋಗ ನೀಡಿರುವ ಆದೇಶವನ್ನು ಪ್ರಶ್ನಿಸಿ ಶರದ್ ಪವಾರ್ ಬಣ, ಮೇಲ್ಮನವಿ ಸಲ್ಲಿಸುವುದಕ್ಕೂ ಮುನ್ನ ಅಜಿತ್ ಪವಾರ್ ಬಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿರುವ ಅಜಿತ್ ಪವಾರ್ ಅವರ ಬಣವೇ ನಿಜವಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಎಂದು ಚುನಾವಣಾ ಆಯೋಗ ಮಂಗಳವಾರ ಪ್ರಕಟಿಸಿದೆ. ಜೊತೆಗೆ ಪಕ್ಷದ 'ಗಡಿಯಾರ' ಚಿಹ್ನೆಯನ್ನೂ ಅಜಿತ್ ಬಣಕ್ಕೆ ನೀಡಿದೆ.
ಈ ಆದೇಶವನ್ನು ಶರದ್ ಪವಾರ್ ಬಣ, ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ. ಹೀಗಾಗಿ, ಅಜಿತ್ ಬಣದ ಪರ ವಕೀಲ ಅಭಿಕಲ್ಪ್ ಪ್ರತಾಪ್ ಸಿಂಗ್ ಅವರು 'ಕೇವಿಯಟ್' ಸಲ್ಲಿಸಿದ್ದಾರೆ.
ಚುನಾವಣಾ ಆಯೋಗದ ಆದೇಶದ ವಿರುದ್ಧ ಶರದ್ ಬಣ ಮೇಲ್ಮನವಿ ಸಲ್ಲಿಸಿದರೆ, ಅವರಿಗೆ ಅನುಕೂಲವಾಗುವಂತಹ ಆದೇಶಗಳು ಬಾರದಂತೆ ಖಾತ್ರಿಪಡಿಸಿಕೊಳ್ಳುವುದು ಹಾಗೂ ತಮ್ಮ ವಾದವನ್ನು ಮೊದಲು ಆಲಿಸುವಂತೆ ಕೋರುವುದು ಅಜಿತ್ ಬಣದ ಉದ್ದೇಶವಾಗಿದೆ.