ಚೆನ್ನೈ: ತಮಿಳುನಾಡಿನ ಕೆಲ ಸಚಿವರು ಮಾಡಿದ್ದಾರೆ ಎನ್ನಲಾದ ಭ್ರಷ್ಟಾಚಾರದ ಕಡತಗಳನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ರಾಜ್ಯಪಾಲರಿಗೆ ಸಲ್ಲಿಕೆ ಮಾಡಲಿದ್ದಾರೆ.
ಬುಧವಾರ ಅವರು ರಾಜ್ಯಪಾಲರನ್ನು ಭೇಟಿ ಮಾಡಲಿದ್ದಾರೆ.
ಏಪ್ರಿಲ್ ತಿಂಗಳಿನಲ್ಲಿ ಡಿಎಂಕೆ ನಾಯಕರ ‘ಭ್ರಷ್ಟಾಚಾರದ ಫೈಲ್‘ ಅನ್ನು ಬಿಡುಗಡೆ ಮಾಡಿದ್ದ ಅವರು, ಅದರಲ್ಲಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಮೇಲೂ ಆರೋಪ ಮಾಡಿದ್ದರು. ಅಲ್ಲದೇ ಭವಿಷ್ಯದಲ್ಲಿ ಇಂಥಹ ಹಲವು ಫೈಲ್ಗಳು ಬರಲಿವೆ ಎಂದು ಹೇಳಿದ್ದರು.
ತಮಿಳುನಾಡಿನಲ್ಲಿ ಪಕ್ಷದ ನೆಲೆಯನ್ನು ಗಟ್ಟಿ ಮಾಡಲು ಬಿಜೆಪಿ ಯತ್ನಿಸುತ್ತಿದ್ದು, ಅದಕ್ಕಾಗಿ ಸರ್ಕಾರದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸುತ್ತಿದೆ.
ಇತ್ತೀಚೆಗೆ ತಮಿಳುನಾಡಿಗೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ನಾಯಕರಿಗೆ ತಳ ಮಟ್ಟದಲ್ಲಿ ಪಕ್ಷ ಸಂಘಟಿಸುವ ಜವಾಬ್ದಾರಿ ನೀಡಿದ್ದು, 2024ರ ಲೋಕಸಭೆಯಲ್ಲಿ ಕನಿಷ್ಠ 25 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ನೀಡಿದ್ದಾರೆ.