ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆ ಬಳಿ ಸ್ಫೋಟಕಗಳಿದ್ದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ವಾಜೆಯನ್ನು ಸೋಮವಾರ ಅಮಾನತುಗೊಳಿಸಲಾಗಿದೆ.
‘ಪೊಲೀಸ್ ವಿಶೇಷ ಶಾಖೆಯ ಹೆಚ್ಚುವರಿ ಆಯುಕ್ತರ ಆದೇಶದಂತೆ ಸಚಿನ್ ವಾಜೆ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಪೊಲೀಸ್ ಉಪ ಆಯುಕ್ತ ಎಸ್.ಚೈತನ್ಯ ತಿಳಿಸಿದರು.
ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಶನಿವಾರ ಸಚಿನ್ ವಾಜೆ ಅವರನ್ನು ಬಂಧಿಸಿತ್ತು. ಅಂಬಾನಿ ಮನೆ ಮುಂದೆ ಪತ್ತೆಯಾದ ಸ್ಕಾರ್ಪಿಯೋ ಕಾರಿನ ಮಾಲೀಕ ಮುನ್ಸುಖ್ ಹಿರೇನ್ ಅವರ ಹತ್ಯೆ ಪ್ರಕರಣದ ಆರೋಪವನ್ನೂ ಸಚಿವ್ ವಾಜೆ ಅವರು ಎದುರಿಸುತ್ತಿದ್ದಾರೆ.
ಮುಂಬೈ ನ್ಯಾಯಾಲಯವು ಭಾನುವಾರ ಸಚಿನ್ ವಾಜೆ ಅವರನ್ನು ಮಾರ್ಚ್ 25 ರ ತನಕ ಎನ್ಐಎ ಕಸ್ಟಡಿಗೆ ನೀಡಿದೆ.