ಬಟಿಂಡಾ: ಪಂಜಾಬ್ನ ಬಟಿಂಡಾ ಸೇನಾ ನೆಲೆಯಲ್ಲಿ ಗುಂಡೇಟಿನ ಗಾಯದಿಂದ ಮತ್ತೊಬ್ಬ ಯೋಧ ಮೃತಪಟ್ಟಿರುವ ಘಟನೆ ಗುರುವಾರ ವರದಿಯಾಗಿದೆ.
ಆದರೆ ಈ ಘಟನೆ ಮತ್ತು ಬುಧವಾರ ನಡೆದ ಗುಂಡಿನ ದಾಳಿಗೂ ಯಾವುದೇ ಸಂಬಂಧವಿಲ್ಲ. ಯೋಧ ಆತ್ಮಹತ್ಯೆ ಮಾಡಿರಬಹುದು ಅಥವಾ ಆಕಸ್ಮಿಕವಾಗಿ ಗುಂಡು ಹಾರಿರಬಹುದು ಎಂದು ಸೇನೆ ತಿಳಿಸಿದೆ.
ಮೃತ ಯೋಧನನ್ನು ಲಾಘು ರಾಜ್ ಶಂಕರ್ ಎಂದು ಗುರುತಿಸಲಾಗಿದೆ.
ನಿನ್ನೆ (ಏ.12) ಸಂಜೆ 4.30ಕ್ಕೆ ಕಾವಲು ಯೋಧ ಗುಂಡೇಟಿನ ಗಾಯದಿಂದ ಮೃತಪಟ್ಟಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಯೋಧನ ಸಮೀಪದಲ್ಲೇ ಪಿಸ್ತೂಲ್ ಹಾಗೂ ಕಾರ್ಟ್ರಿಡ್ಜ್ ಕೇಸ್ ಪತ್ತೆಯಾಗಿದೆ ಎಂದು ಸೇನಾ ಪ್ರಕಟಣೆ ತಿಳಿಸಿದೆ.
ಎಪ್ರಿಲ್ 11ರಂದು ರಜೆ ಮುಗಿಸಿ ಯೋಧ ಲಾಘು ರಾಜ್ ಶಂಕರ್ ಕರ್ತವ್ಯಕ್ಕೆ ಮರಳಿದ್ದರು. ಘಟನೆ ಸಂಬಂಧ ತನಿಖೆ ಪ್ರಾರಂಭಿಸಲಾಗಿದೆ.
ಬಂಟಿಡಾ ಸೇನಾ ನೆಲೆಯಲ್ಲಿ ಬುಧವಾರ ನಸುಕಿನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಫಿರಂಗಿ ದಳದ ನಾಲ್ವರು ಯೋಧರು ಮೃತಪಟ್ಟಿದ್ದರು.