ಅಡ್ವಾಣಿ ಅವರಿಗೆ ಭಾರತರತ್ನ ಪ್ರಶಸ್ತಿ ಸಂದಿರುವುದು ನನಗೆ ಖುಷಿ ನೀಡಿದೆ. ರಾಷ್ಟ್ರದ ಅಭಿವೃದ್ಧಿಗೆ ಅವರು ಅಗಣಿತ ಕೊಡುಗೆ ನೀಡಿದ್ದಾರೆ. ನನ್ನ, ಅವರ ರಾಜಕೀಯ ಸಿದ್ಧಾಂತಗಳು ಭಿನ್ನವಾಗಿದ್ದವು. ಆದರೆ, ಅವರೊಬ್ಬ ಉತ್ತಮ ಸಂಸದೀಯ ಪಟುವಾಗಿದ್ದರು.- ಶರದ್ ಪವಾರ್, ಅಧ್ಯಕ್ಷ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ)
ರಾಷ್ಟ್ರ ನಿರ್ಮಾಣದಲ್ಲಿ ಅಡ್ವಾಣಿ ಅವರ ಕೊಡುಗೆ ಮರೆಯಲಾಗದ್ದು ಹಾಗೂ ಉತ್ತೇಜನಕಾರಿ ಯಾದುದು. ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಅಡ್ವಾಣಿಯವರ ಜೊತೆಗೂಡಿ ಕೆಲಸ ಮಾಡಿದ್ದೇನೆ. ದೇಶದ ಗೌರವಾನ್ವಿತ ಮುತ್ಸದ್ಧಿಗಳಲ್ಲಿ ಅವರೂ ಒಬ್ಬರು.-ನಿತೀಶ್ ಕುಮಾರ್, ಮುಖ್ಯಮಂತ್ರಿ, ಬಿಹಾರ
ಉಪ ಪ್ರಧಾನಿ ಸೇರಿದಂತೆ ವಿವಿಧ ಸಾಂವಿಧಾನಿಕ ಹೊಣೆಗಾರಿಕೆ ನಿಭಾಯಿಸಿರುವ ಎಲ್.ಕೆ.ಅಡ್ವಾಣಿ ಅವರು ದೇಶದ ಭದ್ರತೆ, ಏಕತೆ, ಸೌಹಾರ್ದಕ್ಕೆ ಸಾಟಿಯಿಲ್ಲದ ಸೇವೆ ಸಲ್ಲಿಸಿದ್ದಾರೆ. ಈ ಪ್ರಶಸ್ತಿ ಅವರಿಗಷ್ಟೇ ಅಲ್ಲ, ದೇಶದ ಕೋಟ್ಯಂತರ ಜನರಿಗೆ ಸಂದ ಗೌರವವಾಗಿದೆ.-ಅಮಿತ್ ಶಾ, ಕೇಂದ್ರ ಗೃಹ ಸಚಿವ
ಎಲ್.ಕೆ.ಅಡ್ವಾಣಿ ಅವರು 2002ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿ ಅವರ ಕುರ್ಚಿಯನ್ನು ಉಳಿಸಿದ್ದರು. ಮೋದಿ ಒಬ್ಬ ‘ಅತ್ಯುತ್ತಮ ಕಾರ್ಯಕ್ರಮ ಸಂಘಟಕ’ ಎಂದೂ ಅವರು ಆಗ ಬಣ್ಣಿಸಿದ್ದರು.- ಜೈರಾಂ ರಮೇಶ್, ಕಾಂಗ್ರೆಸ್ ಮುಖಂಡ
ಹಲವು ವರ್ಷ ಕಾಲ, ಹಲವಾರು ರೀತಿಯಲ್ಲಿ ಅಡ್ವಾಣಿಯವರು ಭಾರತದ ವಿಕಸನಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸರ್ಕಾರ ಮತ್ತು ಸಾರ್ವಜನಿಕ ಬದುಕಿನಲ್ಲಿನ ಅವರ ನಾಯಕತ್ವವು ಅನುಕರಣೀಯ.-ಎಸ್.ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವ
ಕೇಂದ್ರದಲ್ಲಿ ತನ್ನ ಅವಧಿ ಅಂತ್ಯವಾಗುವ ಮೊದಲು ಬಿಜೆಪಿ ಈ ಪ್ರಶಸ್ತಿಗೆ ಅಡ್ವಾಣಿಯವರನ್ನು ಆಯ್ಕೆ ಮಾಡಿದೆ. ತನ್ನ ಮತಬ್ಯಾಂಕ್ ಛಿದ್ರಗೊಳ್ಳಬಾರದು ಎಂಬುದೇ ಇದರ ಹಿಂದಿನ ಉದ್ದೇಶ. ಇದನ್ನು ಅವರ ಮೇಲಿನ ಗೌರವದಿಂದ ನೀಡಿದ್ದಲ್ಲ. ಭಾರತರತ್ನ ಪ್ರಶಸ್ತಿಗೆ ತನ್ನದೇ ಗೌರವವಿದೆ. ಆದರೆ, ಅದನ್ನು ಪಕ್ಷದ ಮತಗಳನ್ನು ಭದ್ರಪಡಿಸಿಕೊಳ್ಳಲೆಂದೇ ಈಗ ನೀಡಲಾಗಿದೆ,-ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.