ಪಟ್ನಾ: ಭಾಗಲ್ಪುರ ಜಿಲ್ಲೆಯ ಮೊಜಾಹಿದ್ಪುರ ನಿವಾಸಿಯಾಗಿರುವ ವ್ಯಕ್ತಿಯೊಬ್ಬ ಜೂಜಿನಲ್ಲಿ ಪತ್ನಿಯನ್ನೇ ಪಣಕ್ಕಿಟ್ಟು ಸೋತಿದ್ದಲ್ಲದೆ, ತನ್ನ ಐವರು ಸ್ನೇಹಿತರು ಪತ್ನಿಯ ಮೇಲೆ ಬಲಾತ್ಕಾರ ಎಸಗಿದ್ದರಿಂದ ಕುಪಿತಗೊಂಡು ಆಕೆಯ ಮೇಲೆ ಆ್ಯಸಿಡ್ ಸುರಿದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನವೆಂಬರ್ನಲ್ಲೇ ಈ ಘಟನೆ ನಡೆದಿತ್ತು. ಇದೇ 12ರಂದು ಪತಿಯ ಮನೆಯಿಂದ ತಪ್ಪಿಸಿಕೊಂಡು ಪೋಷಕರ ಮನೆಗೆ ಬಂದಿದ್ದ ಮಹಿಳೆ ಬಳಿಕ ಈ ಸಂಬಂಧ ಜಿಲ್ಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್ಎಸ್ಪಿ) ದೂರು ನೀಡಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಿಕೊಂಡಿರುವ ಇನ್ಸ್ಪೆಕ್ಟರ್ ರಾಜೇಶ್ ಝಾ ಹಾಗೂ ಮಹಿಳಾ ಅಧಿಕಾರಿ ರೀತಾ ಕುಮಾರಿ ಅವರನ್ನೊಳಗೊಂಡ ತಂಡವು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
‘ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ತ್ವರಿತಗತಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಶೀಘ್ರವೇ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ.
‘ಪತಿ ನನ್ನನ್ನು ಜೂಜಿನಲ್ಲಿಟ್ಟು ಸೋತಿದ್ದರಿಂದ ಆತನ ಐವರು ಸ್ನೇಹಿತರು ಮನೆಯಲ್ಲೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದರು. ಇದರಿಂದ ಕುಪಿತಗೊಂಡ ಪತಿಯು ಗುಪ್ತಾಂಗ ಸೇರಿದಂತೆ ಇತರೆಡೆ ಆ್ಯಸಿಡ್ ಹಾಕಿದ್ದಾನೆ. ನನ್ನ ಕಣ್ಣಿಗೆ ಬಟ್ಟೆ ಕಟ್ಟಿದ್ದರಿಂದ ಅತ್ಯಾಚಾರ ಎಸಗಿದವರು ಯಾರು ಎಂಬುದನ್ನು ಪತ್ತೆ ಮಾಡಲು ಆಗಲಿಲ್ಲ’ ಎಂದು ಮಹಿಳೆಯು ದೂರಿನಲ್ಲಿ ತಿಳಿಸಿದ್ದಾರೆ.
‘ಹತ್ತು ವರ್ಷಗಳ ಹಿಂದೆ ನಮ್ಮಿಬ್ಬರ ವಿವಾಹವಾಗಿತ್ತು. ನಮಗೆ ಮಕ್ಕಳಿಲ್ಲ. ಈ ಕಾರಣಕ್ಕೆ ಪತಿ ನಿತ್ಯವೂ ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸುತ್ತಿದ್ದಾರೆ’ ಎಂದೂ ಮಹಿಳೆ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.