ಚಂಡೀಗಢ: ಮಂಗಳವಾರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಬಿಜೆಪಿ ಮುಖಂಡ ನಾಯಬ್ ಸಿಂಗ್ ಸೈನಿ ಅವರು ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೂ ಮೊದಲು ಮನೋಹರಲಾಲ್ ಖಟ್ಟರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ, ಅವರ ಸಂಪುಟದ ಸದಸ್ಯರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಬಿಜೆಪಿ ಮತ್ತು ಜೆಜೆಪಿ ನಡುವಿನ ಮೈತ್ರಿಯು ಅಂತ್ಯಗೊಳ್ಳುತ್ತಿದೆ ಎಂಬ ಊಹಾಪೋಹಗಳ ನಡುವೆ ಮುಖ್ಯಮಂತ್ರಿ ಬದಲಾವಣೆ ಆಗಿದೆ. ಈ ನಡುವೆ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಜೆಜೆಪಿ ಮುಖಂಡ ದುಷ್ಯಂತ್ ಚೌತಾಲ, ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಇಷ್ಟು ದಿನಗಳ ಕಾಲ ಜನ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಹರಿಯಾಣದಲ್ಲಿ 90 ವಿಧಾನಸಭೆ ಕ್ಷೇತ್ರಗಳಿವೆ. ಈ ಪೈಕಿ ಬಹುಮತಕ್ಕೆ 46 ಸಂಖ್ಯಾ ಬಲ ಬೇಕು. ಈಗಾಗಲೇ ಬಿಜೆಪಿ 41 ಶಾಸಕರನ್ನು ಹೊಂದಿದೆ. ಏಳು ಪಕ್ಷೇತರರ ಪೈಕಿ ಆರು ಜನರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ.
10 ಶಾಸಕರನ್ನು ಹೊಂದಿರುವ ಜೆಜೆಪಿ ಬೆಂಬಲ ಇಲ್ಲದೆಯೇ ಬಿಜೆಪಿ ಅಧಿಕಾರ ಹಿಡಿಯಬಹುದು. ಇಲ್ಲಿಯವರೆಗೂ ಜೆಜೆಪಿ ಖಟ್ಟರ್ ಸರ್ಕಾರಕ್ಕೆ ಬೆಂಬಲ ನೀಡಿತ್ತು.