ನವದೆಹಲಿ: ಕೆನಡಾ ಮೂಲದ ಗ್ಯಾಂಗ್ಸ್ಟರ್ ಸತೀಂದರ್ಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ನನ್ನು ಭಯೋತ್ಪಾದಕ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಈತ, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಪ್ರಮುಖ ರೂವಾರಿ ಎಂದು ಆರೋಪಿಸಲಾಗಿದೆ.
ಪಾಕ್ ಮೂಲದ ಏಜೆನ್ಸಿಯೊಂದರ ಬೆಂಬಲವಿದ್ದ ಈತನನ್ನು ಭಯೋತ್ಪಾದನಾ ನಿಗ್ರಹ ಕಾಯ್ದೆ ಯುಎಪಿಎ ಅನ್ವಯ ಭಯೋತ್ಪಾದಕ ಎಂದು ಘೋಷಿಸಿದ್ದು, ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ.
ಹಲವು ಕೊಲೆ ಕೃತ್ಯಗಳಲ್ಲೂ ಭಾಗಿಯಾಗಿದ್ದು, ಮೂಲಭೂತವಾದಿ ಚಿಂತನೆ ಹೊಂದಿದ್ದ. ರಾಷ್ಟ್ರೀಯವಾದಿ ನಾಯಕರಿಗೆ ಕರೆ ಮಾಡಿ ಒತ್ತೆಹಣಕ್ಕೆ ಬೇಡಿಕೆ ಮಂಡಿಸುತ್ತಿದ್ದ. ಅಲ್ಲದೆ, ಕೊಲೆ ಕೃತ್ಯಗಳನ್ನು ನಡೆಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದ.
ನಿಷೇಧಿತ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಸಂಘಟನೆಯ ಕಾರ್ಯಕರ್ತನಾಗಿದ್ದು ಉನ್ನತದರ್ಜೆಯ ಶಸ್ತ್ರಾಸ್ತ್ರಗಳು, ಸ್ಫೋಟಕಗಳನ್ನು ಡ್ರೋನ್ ಬಳಸಿ ಗಡಿಯಾಚೆಗೆ ಕಳ್ಳಸಾಗಣೆ ಮಾಡಿ ಶಾರ್ಪ್ ಶೂಟರ್ಗಳಿಗೆ ಒದಗಿಸುತ್ತಿದ್ದ ಆರೋಪಗಳು ಈತನ ಮೇಲಿವೆ.
ಮೂಲತಃ ಪಂಜಾಬ್ನ ಶ್ರೀ ಮುಕ್ತಸರ ಸಾಹಿಬ್ನವನಾದ ಈತ ಸದ್ಯ ಕೆನಡಾದ ಬ್ರಾಂಪ್ಟನ್ನಲ್ಲಿ ನೆಲೆಸಿದ್ದಾನೆ. ಈತ ಮತ್ತು ಈತನ ಸಹಚರರು ಪಂಜಾಬ್ನಲ್ಲಿ ಶಾಂತಿ ಸುವ್ಯವಸ್ಥೆ ಸ್ಥಿತಿಯನ್ನು ಕದಡಲು ಯತ್ನಿಸುತ್ತಿದ್ದರು ಎಂದು ಕೇಂದ್ರ ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ.
ಈತನ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಲ್ಲಿದ್ದು, ಆತನ ಪತ್ತೆಗಾಗಿ ಇಂಟರ್ಪೋಲ್, ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ.