ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಡೀಗಢ ಮೇಯರ್ ಆಯ್ಕೆ ಪ್ರಕ್ರಿಯೆ: ಮತಪತ್ರ, ವಿಡಿಯೊ ಪರಿಶೀಲನೆ ಇಂದು

ಚುನಾವಣಾಧಿಕಾರಿಯ ತರಾಟೆಗೆ ತೆಗೆದುಕೊಂಡ ‘ಸುಪ್ರೀಂ’
Published 19 ಫೆಬ್ರುವರಿ 2024, 23:30 IST
Last Updated 19 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಚಂಡೀಗಢ ಮೇಯರ್ ಚುನಾವಣೆಗೆ ಸಂಬಂಧಿಸಿದ ಮತಪತ್ರಗಳು ಮತ್ತು ವಿಡಿಯೊ ದೃಶ್ಯಗಳನ್ನು ಮಂಗಳವಾರ ಖುದ್ದು ಸೂಕ್ಷ್ಮವಾಗಿ ಅವಲೋಕಿಸುವುದಾಗಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ನ್ಯಾಯಪೀಠವು ಸೋಮವಾರ ಪ್ರಕಟಿಸಿತು. 

ಮತಪತ್ರಗಳು ಮತ್ತು ವಿಡಿಯೊ ದೃಶ್ಯಗಳ ಅಡಕಗಳನ್ನು ಸುರಕ್ಷಿತವಾಗಿ ದೆಹಲಿಗೆ ತರಲು ನ್ಯಾಯಾಂಗ ಅಧಿಕಾರಿಯೊಬ್ಬರನ್ನು ನಿಯೋಜಿಸಬೇಕು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ನಿರ್ದೇಶಿಸಿತು. ಅಲ್ಲದೆ, ನ್ಯಾಯಾಂಗ ಅಧಿಕಾರಿ ಮತ್ತು ದಾಖಲೆಗಳಿಗೆ ಅಗತ್ಯ ಭದ್ರತೆ ಒದಗಿಸಬೇಕು ಪೀಠವು ಚಂಡೀಗಢ ಜಿಲ್ಲಾ ಆಡಳಿತಕ್ಕೆ ಆದೇಶಿಸಿತು.

‘ಈ ದಾಖಲೆಗಳನ್ನು ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಖುದ್ದಾಗಿ ಅವಲೋಕಿಸುತ್ತೇವೆ’ ಎಂದು ನ್ಯಾಯಪೀಠದ ಸದಸ್ಯರು ಪ್ರಕಟಿಸಿದರು. ನ್ಯಾಯಮೂರ್ತಿಗಳಾದ ಜೆ.ಪಿ.ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರು ಈ ಪೀಠದ ಇತರ ಸದಸ್ಯರು.

ಮಂಗಳವಾರದ ಬದಲು ಬೇರೊಂದು ದಿನ ಈ ಪ್ರಕರಣದ ವಿಚಾರಣೆಯನ್ನು ನಡೆಸಬೇಕು ಎಂಬ ಕೋರಿಕೆಯನ್ನು ತಳ್ಳಿಹಾಕಿದ ಮುಖ್ಯ ನ್ಯಾಯಮೂರ್ತಿ, ‘ಸದಸ್ಯರ ಖರೀದಿ ನಡೆಯುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ಚುನಾವಣಾಧಿಕಾರಿ ಅನಿಲ್‌ ಮಸೀಹ್‌ ಅವರನ್ನು ಫೆ.5ರಂದು ತರಾಟೆಗೆ ತೆಗೆದುಕೊಂಡಿದ್ದ ಸುಪ್ರೀಂ ಕೋರ್ಟ್, ‘ಅಧಿಕಾರಿಯು ಮತಪತ್ರಗಳನ್ನು ವಿರೂಪಗೊಳಿಸಿರುವುದು ನಿಜ. ಅವರನ್ನು ಶಿಕ್ಷೆಗೊಳಪಡಿಸಬೇಕು. ಅವರ ನಡೆಯು ಪ್ರಜಾಪ್ರಭುತ್ವದ ಅಣಕ ಮತ್ತು ಹತ್ಯೆ’ ಎಂದಿತ್ತು.

ಸುಪ್ರೀಂ ನಿರ್ದೇಶನದಂತೆ ಸೋಮವಾರ ಪೀಠದ ಎದುರು ಹಾಜರಾಗಿದ್ದ ಮಸೀಹ್ ಅವರನ್ನು ನ್ಯಾಯಮೂರ್ತಿಗಳು ತೀವ್ರ ಪಾಟಿಸವಾಲಿಗೆ ಒಳಪಡಿಸಿದರು.

ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಿದ ಮಸೀಹ್, ‘ಆಗಲೇ ಹಾಳಾಗಿದ್ದ ಎಂಟು ಮತಪತ್ರಗಳ ಮೇಲೆ ನಾನು ‘ಎಕ್ಸ್‌’ ಎಂದು ಗುರುತು ಮಾಡಿದ್ದೆ. ಎಎಪಿ ಸದಸ್ಯರು ಗೊಂದಲ ಮೂಡಿಸಿದ್ದು, ಮತಪತ್ರಗಳನ್ನು ಕಸಿಯಲು ಯತ್ನಿಸಿದರು. ಇದೇ ಕಾರಣದಿಂದ ನಾನು ಮತ ಎಣಿಕೆ ಕೇಂದ್ರದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾದತ್ತ ದೃಷ್ಟಿಯನ್ನು ಹರಿಸಿದ್ದೆ‘ ಎಂದು ತಮ್ಮ ನಡೆಗೆ ಕಾರಣ ತಿಳಿಸಿದರು.

ಮೇಯರ್ ಅಯ್ಕೆಗೆ ಸಂಬಂಧಿಸಿದಂತೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪಾಲಿಕೆಯ ಎಎಪಿ ಸದಸ್ಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮತ್ತು ಎಎಪಿ ಮೈತ್ರಿ ಮಾಡಿಕೊಂಡಿದ್ದವು. ಆದರೆ, ಬಿಜೆಪಿಯು ಅಂದು ನಡೆದ ಮೇಯರ್ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಎಂಟು ಮತಗಳನ್ನು ಅಸಿಂಧು ಎಂದು ಚುನಾವಣಾಧಿಕಾರಿ ಘೋಷಿಸಿದ್ದರು. 

ಎಎಪಿ ಅಭ್ಯರ್ಥಿ ಕುಲದೀಪ್‌ ಕುಮಾರ್‌ ಅವರನ್ನು ಪರಾಭವಗೊಳಿಸಿ ಬಿಜೆಪಿಯ ಮನೋಜ್‌ ಸೋನಕರ್ ಮೇಯರ್ ಆಗಿ ಆಯ್ಕೆಯಾಗಿದ್ದರು. ಆದರೆ, ನಂತರದ ಬೆಳವಣಿಗೆಯಲ್ಲಿ ಅವರು ಮೇಯರ್‌ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT