ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 354 ಹೊಸ ಪ್ರಕರಣಗಳು ದಾಖಲಾಗಿದ್ದು, ಕೊರೊನಾ ವೈರಸ್ ಸೋಂಕಿನಿಂದ 8 ಮಂದಿ ಸಾವಿಗೀಡಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಹೇಳಿದೆ.
ದೇಶದಲ್ಲಿ ಈವರೆಗೂ ಒಟ್ಟು 4,421 ಕೋವಿಡ್–19 ಪ್ರಕರಣಗಳು ದಾಖಲಾಗಿವೆ. ಹಾಗೂ ಸಾವಿನ ಸಂಖ್ಯೆ 117 ತಲುಪಿದೆ.
'ಕಳೆದ 24 ಗಂಟೆಗಳಲ್ಲಿ 354 ಸೋಂಕು ಪ್ರಕರಣಗಳು ವರದಿಯಾಗುವ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 4,421ಕ್ಕೆ ಏರಿಕೆಯಾಗಿದ್ದು, 326 ಮಂದಿ ಗುಣಮುಖರಾಗಿದ್ದಾರೆ' ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವಅಗರ್ವಾಲ್ ಹೇಳಿದ್ದಾರೆ.
Updates on #COVID19
— PIB India 🇮🇳 #StayHome #StaySafe (@PIB_India) April 7, 2020
As of now, 4421 confirmed cases and 117 deaths have been reported. 326 persons have been cured/discharged after recovery.#IndiaFightsCorona
Details: https://t.co/izd1sg4dnY
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನದಪ್ರಕಾರ, ಒಬ್ಬ ಕೋವಿಡ್–19 ರೋಗಿಯು 30 ದಿನಗಳಲ್ಲಿ ಕನಿಷ್ಠ 406 ಜನರಿಗೆ ಸೋಂಕು ಹರಡಬಹುದು. ಕೊರೊನಾ ವೈರಸ್ ಸೋಂಕಿತ ವ್ಯಕ್ತಿ ಲಾಕ್ಡೌನ್ ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಅನುಸರಿಸದಿದ್ದರೆ, ನೂರಾರು ಜನರಿಗೆ ಸೋಂಕು ಹರಡುವುದು ಖಚಿತ ಎಂದು ಐಸಿಎಂಆರ್ ಅಧ್ಯಯನದಿಂದ ತಿಳಿದು ಬಂದಿದೆ.
‘ದಿಗ್ಬಂಧನ ಮತ್ತು ಸಾಮಾಜಿಕ ಅಂತರವನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರೆ, 30 ದಿನಗಳಲ್ಲಿ ಕೊರೊನಾ ಸೋಂಕು ತಗುಲಿರುವ ಒಬ್ಬ ವ್ಯಕ್ತಿಯಿಂದ, ಸೋಂಕಿಗೆ ಒಳಗಾಗುವ ವ್ಯಕ್ತಿಗಳ ಸಂಖ್ಯೆಯನ್ನು 2.5ಕ್ಕೆ ಇಳಿಸಬಹುದು’ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಆದರೆ, ರಾಜ್ಯವಾರು ಬಿಡುಗಡೆಯಾಗಿರುವ ಸೋಂಕು ಪ್ರಕರಣಗಳ ಪ್ರಕರಾ ಸೋಮವಾರ ರಾತ್ರಿಯವರೆಗೂ ದೇಶದಾದ್ಯಂತ ಸಾವಿಗೀಡಾದವರ ಸಂಖ್ಯೆ 138 ಮುಟ್ಟಿದೆ. ಒಟ್ಟು ಪ್ರಕರಣಗಳು 4,683 ದಾಟಿದೆ ಎಂದು ಪಿಟಿಐ ವರದಿ ಮಾಡಿದೆ.
ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಕಾರ್ಯ ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಆಗ್ರಾ, ಗೌತಮ್ ಬುದ್ಧ ನಗರ, ಭಿಲ್ವಾರಾ, ಪೂರ್ವ ದೆಹಲಿ ಹಾಗೂ ಮುಂಬೈನಲ್ಲಿ ಸೂಕ್ತ ಫಲಿತಾಂಶ ಕಂಡು ಬಂದಿದೆ. ಈ ಕಾರ್ಯ ಯೋಜನೆಗಳನ್ನು ಇನ್ನಷ್ಟು ಕೊರೊನಾ ಪೀಡಿತ ಪ್ರದೇಶಗಳಲ್ಲಿ ಅಳವಡಿಸಲಾಗುವುದು ಎಂದು ಅಗರ್ವಾಲ್ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮಂಗಳವಾರ 150 ಜನರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಒಟ್ಟು ಕೋವಿಡ್–19 ಪ್ರಕರಣಗಳು 1,018 ತಲುಪಿದೆ. ಈ ಮೂಲಕ ದೇಶದಲ್ಲಿ 1,000 ಪ್ರಕರಣ ದಾಟಿದ ಮೊದಲ ರಾಜ್ಯ ಮಹಾರಾಷ್ಟ್ರ ಆಗಿದೆ. ಮುಂಬೈನಲ್ಲೇ ಮಂಗಳವಾರ ಒಂದೇ ದಿನ 116 ಪ್ರಕರಣಗಳು ವರದಿಯಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.