ಥಾಣೆ: ಎಐಐಎಂನ ಭಿವಾಂಡಿ ಘಟಕದ ಮುಖ್ಯಸ್ಥ ಖಲೀದ್ ಗುಡ್ಡು ಮತ್ತು ಅವರ ಸಹೋದರರ ಖಾಸಗಿ ಕಚೇರಿಯಿಂದ ನಕಲಿ ಆಧಾರ್ ಮತ್ತು ಪಡಿತರ ಚೀಟಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವರಿಬ್ಬರು ಸದ್ಯ ಸುಲಿಗೆ ಮತ್ತು ಇತರ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
364ಎ (ಸುಲಿಗೆಗಾಗಿ ಅಪಹರಣ) ಮತ್ತು 384 (ಸುಲಿಗೆ) ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಗುಡ್ಡು, ಅವರ ಸಹೋದರ ಬಬ್ಲು ಮತ್ತು ಅವರ ಸಹಾಯಕರನ್ನು ಪೊಲೀಸರು ಕಳೆದ ತಿಂಗಳು ಬಂಧಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
'ಅವರ ವಿರುದ್ಧದ ತನಿಖೆಯ ವೇಳೆ ರಬ್ಬರ್ ಸ್ಟಾಂಪ್ಗಳ ಗುರುತಿನೊಂದಿಗೆ ಖಾಲಿ ರೇಷನ್ ಕಾರ್ಡ್ಗಳನ್ನು ಮತ್ತು 30 ಆಧಾರ್ ಕಾರ್ಡ್ಗಳನ್ನು ಭಿವಾಂಡಿಯಲ್ಲಿರುವ ಅವರ ಖಾಸಗಿ ಕಚೇರಿಯಿಂದ ವಶಪಡಿಸಿಕೊಂಡಿದ್ದಾರೆ' ಎಂದು ಡಿಸಿಪಿ ವಲಯ -2ರ ರಾಜ್ಕುಮಾರ್ ಶಿಂಧೆ ತಿಳಿಸಿದ್ದಾರೆ.
ಪರಿಶೀಲನೆಗಾಗಿ ಖಾಲಿಯಿದ್ದ ಪಡಿತರ ಚೀಟಿಗಳನ್ನು ಅಧಿಕಾರಿಗಳಿಗೆ ಕಳುಹಿಸಿದಾಗ, ಅವುಗಳನ್ನು ಕಚೇರಿಯಿಂದ ನೀಡಲಾಗಿಲ್ಲ ಮತ್ತು ಅವುಗಳ ಮೇಲಿನ ಮುದ್ರೆಯು ಅದಕ್ಕೆ ಸೇರಿದ್ದಲ್ಲ ಎಂದು ತಿಳಿಸಲಾಗಿದೆ.
30 ಆಧಾರ್ ಕಾರ್ಡ್ಗಳನ್ನು ಪರಿಶೀಲಿಸಿದಾಗ ಅವುಗಳಲ್ಲಿ ನಾಲ್ಕು ನಕಲಿ ಎಂದು ತಿಳಿದುಬಂದಿದೆ. ಕಾರ್ಡ್ಗಳಲ್ಲಿ ಹೆಸರುಗಳು ಕಂಡುಬಂದ ಇಬ್ಬರು ವ್ಯಕ್ತಿಗಳನ್ನು ಪ್ರಶ್ನಿಸಿದಾಗ ಹೆಸರುಗಳು, ವಿಳಾಸಗಳು ಮತ್ತು ಫೊಟೋಗಳು ನಕಲಿ ಎಂಬುದು ಬೆಳಕಿಗೆ ಬಂದಿದೆ.
ಈ ಬಗ್ಗೆ ವಿಚಾರಿಸಿದಾಗ, ಈ ಕಾರ್ಡ್ಗಳನ್ನು ಚುನಾವಣಾ ಉದ್ದೇಶಗಳಿಗಾಗಿ ತಯಾರಿಸಲಾಗಿದೆ ಎಂದು ಗುಡ್ಡು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಶಿಂಧೆ ಹೇಳಿದ್ದಾರೆ.
ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 465, 467, 472 ಮತ್ತು 420ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರಿಬ್ಬರು ಮತ್ತು ಅವರ ಸಹಚರರ ವಿರುದ್ಧ ಅರ್ಧ ಡಜನ್ ಸುಲಿಗೆ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.