ನವದೆಹಲಿ: ‘ನೆರೆಹೊರೆ ದೇಶದಿಂದ ಭಾರತದ ಗಡಿಯೊಳಗೆ ನುಗ್ಗಿ ಶಾಂತಿ ಕದಡಲು ಯತ್ನಿಸುವ ಉಗ್ರರನ್ನು ಅವರ ದೇಶದೊಳಗೆ ನುಗ್ಗಿ ಹೊಡೆಯುತ್ತೇವೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುಡುಗಿದ್ದಾರೆ.
ಆಂಗ್ಲ ಮಾಧ್ಯಮ ‘ದಿ ಗಾರ್ಡಿಯನ್’ನಲ್ಲಿ ಇತ್ತೀಚೆಗೆ ಪ್ರಕಟವಾಗಿದ್ದ, ‘ಭಾರತದ ಗುಪ್ತಚರ ಸಂಸ್ಥೆ ಅಧಿಕಾರಿಗಳು ಪಾಕಿಸ್ತಾನದಲ್ಲಿ ಸುಮಾರು 20ಕ್ಕೂ ಹೆಚ್ಚು ಉಗ್ರರನ್ನು ಸದ್ದಿಲ್ಲದೇ ಹತ್ಯೆ ಮಾಡಿದ್ದಾರೆ’ ಎಂಬ ವರದಿಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
‘ಉಗ್ರರು ಭಾರತದೊಳಗೆ ಬಂದು ಶಾಂತಿ ಕದಡಿ ಒಂದು ವೇಳೆ ಅವರು ಪಾಕಿಸ್ತಾನಕ್ಕೆ ಓಡಿ ಹೋದರೆ ನಾವು ಪಾಕಿಸ್ತಾನವನ್ನು ಪ್ರವೇಶಿಸಿ ಅವರನ್ನು ಕೊಲ್ಲುತ್ತೇವೆ’ ಎಂದು ವರದಿಯನ್ನು ಪುಷ್ಠೀಕರಿಸಿದ್ದಾರೆ.
‘ಗಡಿಯಾಚಿಗಿನ ಭಯೋತ್ಪಾದನೆಯನ್ನು ಹತ್ತಿಕ್ಕಲು ಭಾರತ ಶಕ್ತವಾಗಿದೆ. ಈ ವಿಷಯ ಇತ್ತೀಚೆಗೆ ಪಾಕಿಸ್ತಾನಕ್ಕೆ ಅರಿವಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
‘ಅದಾಗ್ಯೂ ನಮ್ಮ ನೆರೆಹೊರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ನಾವು ಪರಿಶ್ರಮಿಸುತ್ತೇವೆ’ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.