ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಖರ್ಗೆ ಫೋಟೊ ವಿರೂಪ: ಕಠಿಣ ಎಚ್ಚರಿಕೆ ನೀಡಿದ ಕಾಂಗ್ರೆಸ್‌ ಹೈಕಮಾಂಡ್‌

Published 20 ಮೇ 2024, 13:57 IST
Last Updated 20 ಮೇ 2024, 13:57 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಸೋಮವಾರ ಕಠಿಣ ಎಚ್ಚರಿಕೆ ನೀಡಿದೆ. ಕೋಲ್ಕತ್ತದಲ್ಲಿರುವ ಪಕ್ಷದ ಕಚೇರಿಯ ಹೊರ ಭಾಗದಲ್ಲಿಟ್ಟಿದ್ದ ಹೋರ್ಡಿಂಗ್‌ಗಳನ್ನು ಧ್ವಂಸಗೊಳಿಸಿದ ಕೃತ್ಯದ ಬಗ್ಗೆ ವರದಿ ಸಲ್ಲಿಸುವಂತೆ ತನ್ನ ರಾಜ್ಯ ಘಟಕಕ್ಕೆ ಸೂಚಿಸಿದೆ.

ಪಕ್ಷದ ಕಚೇರಿ ಮುಂಭಾಗದಲ್ಲಿರುವ ಖರ್ಗೆ ಅವರ ಪೋಸ್ಟರ್‌ ಮತ್ತು ಜಾಹೀರಾತು ಫಲಕಗಳನ್ನು ಭಾನುವಾರ ವಿರೂಪಗೊಳಿಸಲಾಗಿತ್ತು. ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ‘ಇಂಡಿಯಾ’ ಕೂಟಕ್ಕೆ ಹೊಂದಿರುವ ನಿಷ್ಠೆಯನ್ನು ಪಶ್ಚಿಮ ಬಂಗಾಳ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಪ್ರಶ್ನಿಸಿದ್ದರು. ಅದರ ಬಗ್ಗೆ ಖರ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಮರುದಿನ ಅವರ ಫೋಟೊವನ್ನು ವಿರೂಪಗೊಳಿಸಲಾಗಿತ್ತು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ‘ಪಕ್ಷವು ಇಂತಹ ಅಶಿಸ್ತನ್ನು ಸಹಿಸುವುದಿಲ್ಲ’ ಎಂದು ಹೇಳಿದ್ದಾರೆ.

‘ಪಕ್ಷ ವಿರೋಧಿ ಚಟುವಟಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಆಶಿಸ್ತಿನ ಘಟನೆ ಬಗ್ಗೆ ವರದಿ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದೇವೆ’ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಕ್ಷದ ಕೆಲವು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಖರ್ಗೆ ಅವರನ್ನು ಟೀಕಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದನ್ನು ಪಕ್ಷದ ಹೈಕಮಾಂಡ್‌ ಗಮನಕ್ಕೆ ತರಲಾಗಿದೆ ಎಂದೂ ಅವರು ಹೇಳಿದ್ದಾರೆ. 

‘ಕೋಲ್ಕತ್ತದ ಕಚೇರಿಯ ಹೊರಗಡೆ ಇಟ್ಟಿದ್ದ ಭಿತ್ತಿಪತ್ರ ಮತ್ತು ಜಾಹೀರಾತು ಫಲಕಗಳನ್ನು ಕೆಲವು ದುಷ್ಕರ್ಮಿಗಳು ಹಾನಿಗೊಳಿಸಿದ ಘಟನೆ ನಡೆದಿದೆ. ಇದು ಪಕ್ಷದ ಕೋಟ್ಯಂತರ ಕಾರ್ಯಕರ್ತರು ಮತ್ತು ಬೆಂಬಲಿಗರ ಭಾವನೆಗಳಿಗೆ ನೋವುಂಟು ಮಾಡಿದೆ’ ಎಂದಿದ್ದಾರೆ.

ಅಧೀರ್‌ ಬಗ್ಗೆ ಖರ್ಗೆ ಪ್ರಶಂಸೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಶ್ಚಿಮ ಬಂಗಾಳ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಅವರನ್ನು ‘ಹೋರಾಡುವ ಸ್ವಭಾವದ ಯೋಧ’ ಎಂದು ಶ್ಲಾಘಿಸಿದ್ದಾರೆ.  ಮಮತಾ ಅವರ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದ ಅಧೀರ್‌ ಅವರನ್ನು ಖರ್ಗೆ ಎರಡು ದಿನಗಳ ಹಿಂದೆ ಟೀಕಿಸಿದ್ದರು. ‘ಪಶ್ಚಿಮ ಬಂಗಾಳದಲ್ಲಿ ಅಧೀರ್‌ ಅವರು ನಮ್ಮ ನಾಯಕ’ ಎಂದು ಖರ್ಗೆ ಸೋಮವಾರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT