ಬೆಂಗಳೂರು: ಸೂರ್ಯನ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಕಳುಹಿಸಿರುವ ಆದಿತ್ಯ ಎಲ್-1 ನೌಕೆ ನಿಗದಿತ ಕಕ್ಷೆ ತಲುಪಿದೆ.
ಈ ಬಗ್ಗೆ ಶನಿವಾರ ಇಸ್ರೊದ ‘ಆದಿತ್ಯ ಎಲ್-1 ಯೋಜನೆ’ X ಖಾತೆ ಮಾಹಿತಿ ಹಂಚಿಕೊಂಡಿದೆ.
‘ಆದಿತ್ಯ ಎಲ್-1 ಭೂಮಿಯಿಂದ 15 ಲಕ್ಷ ಕಿಲೋಮೀಟರ್ ಯಾನ ಮಾಡಿ ನಿಗದಿತ ಕಕ್ಷೆ ಸೂರ್ಯನ ಲಾಗ್ರೇಂಜ್ ಪಾಯಿಂಟ್ ಎಲ್1 ಅನ್ನು ಸುರಕ್ಷಿತವಾಗಿ ತಲುಪಿದೆ’ ಎಂದು ತಿಳಿಸಿದೆ.
‘ಸೂರ್ಯನ ಬಗೆಗಿನ ನಿಗೂಢ ವಿಷಯಗಳನ್ನು ಪತ್ತೆಹಚ್ಚಲು ಆದಿತ್ಯ ಎಲ್ 1 ಭೂಮಿಯೊಂದಿಗೆ ನಿರಂತರ ಸಂಪರ್ಕದಲ್ಲಿರಲಿದೆ’ ಎಂದು ತಿಳಿಸಿದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಆದಿತ್ಯ ಎಲ್ 1 ತನ್ನ ನಿಗದಿತ ಕಕ್ಷೆಯನ್ನು ತಲುಪಿದೆ. ಈ ಮೂಲಕ ಭಾರತ ಮತ್ತೊಂದು ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ. ಇದು ನಮ್ಮ ವಿಜ್ಞಾನಿಗಳ ನಿರಂತರ ಪರಿಶ್ರಮದಿಂದ ಸಾಧ್ಯವಾಗಿದೆ. ಅವರೆಲ್ಲರನ್ನೂ ನಾನು ಅಭಿನಂದಿಸುತ್ತೇನೆ. ಆದಿತ್ಯ ನೌಕೆಯ ಹೊಸ ಸಾಹಸದ ಮೂಲಕ ಸೂರ್ಯನ ನಿಗೂಢಗಳನ್ನು ಪತ್ತೆ ಹಚ್ಚಿ ಮಾನವೀಯತೆ ನೆಲೆಗಟ್ಟಿನಲ್ಲಿ ವಿಜ್ಞಾನ ಬೆಳೆಸಲು ಶ್ರಮಿಸೋಣ’ ಎಂದು ಹೇಳಿದ್ದಾರೆ.