ಪಟ್ನಾ: ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಜೆಡಿಯು ಮುಖಂಡ ಉಪೇಂದ್ರ ಕುಶ್ವಾಹ ಅವರು ಸೋಮವಾರ ಹೇಳಿದ್ದು, ನೂತನ ಪಕ್ಷ ‘ರಾಷ್ಟ್ರೀಯ ಲೋಕ ಜನತಾ ದಳ’ ರಚಿಸಿರುವುದಾಗಿ ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸಭಾಪತಿಯನ್ನು ಭೇಟಿಯಾಗಿ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದಾರೆ.
‘ನಾನು ನನ್ನ ಹಿರಿಯಣ್ಣ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಂದ ಕೆಲವು ಪಾಠಗಳನ್ನು ಕಲಿತಿದ್ದೇನೆ’ ಎಂದೂ ಅವರು ಹೇಳಿದರು.
‘ನಿತೀಶ್ ಕುಮಾರ್ ಅವರು ತನ್ನ ರಾಜಕೀಯ ಬಂಡವಾಳವನ್ನು ‘ಗಿರವಿ’ ಇಟ್ಟಿದ್ದಾರೆ ಎಂದು ಆರೋಪಿಸಿದ ಕುಶ್ವಾಹ, ಉಪಮುಖ್ಯಮಂತ್ರಿ ಹಾಗೂ ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಅವರನ್ನು ಭವಿಷ್ಯದ ನಾಯಕ ಎಂದು ಘೋಷಿಸಿರುವುದಕ್ಕೆ ಅವರ ಹೆಸರು ಉಲ್ಲೇಖಿಸದೆ ಅಸಮಾಧಾನ ವ್ಯಕ್ತಪಡಿಸಿದರು.
2021ರಲ್ಲಿ ಜೆಡಿಯುಗೆ ಮರಳಿದ್ದ ಕುಶ್ವಾಹ ಅವರು, ತಮ್ಮ ರಾಷ್ಟ್ರೀಯ ಲೋಕ ಸಮತಾ ಪಕ್ಷವನ್ನು ಅದರೊಂದಿಗೆ ವಿಲೀನಗೊಳಿಸಿದ್ದರು.