ಗೋಡಂಬಿ ಉದ್ಯಮಕ್ಕೆ ಹೆಸರುವಾಸಿಯಾಗಿರುವ ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಏರುತ್ತಿದ್ದು, ಎಲ್ಡಿಎಫ್ ಮತ್ತು ರೆವೆಲ್ಯುಷನರಿ ಸೋಷಿಯಲಿಸ್ಟ್ ಪಕ್ಷದ (ಆರ್ಎಸ್ಪಿ) ಅಭ್ಯರ್ಥಿಗಳ ನಡುವಣ ನೇರ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದೆ.
ಈ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಗೆದ್ದು ಬೀಗುತ್ತಿರುವ ಆರ್ಎಸ್ಪಿ ನಾಯಕ ಎನ್.ಕೆ. ಪ್ರೇಮಚಂದ್ರನ್ ಈ ಬಾರಿಯೂ ಕಣಕ್ಕಿಳಿದಿದ್ದಾರೆ. ಇವರ ಗೆಲುವಿನ ಓಟಕ್ಕೆ ಕಡಿವಾಣ ಹಾಕಲು ಆಡಳಿತಾರೂಢ ಸಿಪಿಎಂ ನೇತೃತ್ವದ ಎಲ್ಡಿಎಫ್ ಮೈತ್ರಿಕೂಟವು ಸದ್ಯ ಶಾಸಕರಾಗಿರುವ, ಸಿನಿಮಾ ನಟ ಮುಕೇಶ್ ಅವರನ್ನು ಅಖಾಡಕ್ಕಿಳಿಸಿದೆ. ಆರ್ಎಸ್ಪಿಯು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿ ಕೂಟದ ಜೊತೆಗಿದೆ. ಈ ಬಾರಿ ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆಂಬ ವಿಶ್ವಾಸದಲ್ಲಿರುವ ಬಿಜೆಪಿಯು ಸಿನಿಮಾ ನಟ ಜಿ. ಕೃಷ್ಣಕುಮಾರ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.
ಕೊಲ್ಲಂ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಎಂನಿಂದ ಗೆದ್ದು ಶಾಸಕರಾಗಿರುವ ಮುಕೇಶ್ ಅವರು ಕ್ಷೇತ್ರದಲ್ಲಿ ಪ್ರಭಾವಿಯಾಗಿರುವುದರಿಂದ ಈ ಬಾರಿ ಗೆದ್ದೇ ಗೆಲ್ಲುತ್ತಾರೆಂಬ ನಂಬಿಕೆ ಎಲ್ಡಿಎಫ್ಗಿದೆ. ಇದು ಹಿಂದೂ ಪ್ರಾಬಲ್ಯವಿರುವ ಕ್ಷೇತ್ರವಾಗಿರುವುದರಿಂದ ಕೃಷ್ಣಕುಮಾರ್ ಕೂಡ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯು ಮೂರನೇ ಸ್ಥಾನ ಗಳಿಸಿತ್ತು. ಪ್ರೇಮಚಂದ್ರನ್ ಅವರು 4,99,677 ಮತಗಳನ್ನು ಪಡೆದು ಜಯಗಳಿಸಿದ್ದರು.