ಮುಂಬೈ:ಹಿಂದುತ್ವವಾದಿ ವೀರ ಸಾವರ್ಕರ್ ಅವರು ಅಂದು ಪ್ರಧಾನಿಯಾಗಿದ್ದಿದ್ದರೆ ಪಾಕಿಸ್ತಾನವೇ ಉದಯಿಸುತ್ತಿರಲಿಲ್ಲ ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ. ಜತೆಗೆ ಸಾವರ್ಕರ್ ಅವರಿಗೆ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸಾವರ್ಕರ್ ಜೀವನಚರಿತ್ರೆ ‘ಸಾವರ್ಕರ್: ಎಖೋಸ್ ಫ್ರಮ್ ಎ ಫಾರ್ಗಟ್ಟನ್ ಪಾಸ್ಟ್’ ಬಿಡುಗಡೆ ಸಮಾರಂಭದಲ್ಲಿ ಮಂಗಳವಾರ ಉದ್ಧವ್ ಈ ಹೇಳಿಕೆ ನೀಡಿದ್ದಾರೆ.
‘ಮಹಾತ್ಮ ಗಾಂಧಿ ಮತ್ತು ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರ ಕೊಡುಗೆಗಳನ್ನು ನಾವು ನಿರಾಕರಿಸುತ್ತಿಲ್ಲ. ರಾಜಕೀಯ ಹಿನ್ನೆಲೆಯ ಈ ಎರಡು ಕುಟುಂಬಗಳ ಕೊಡುಗೆಗಳಿಗಿಂತಲೂ ಹೆಚ್ಚಿನದ್ದನ್ನು ದೇಶ ಕಂಡಿದೆ’ ಎಂದು ಠಾಕ್ರೆ ಹೇಳಿದ್ದಾರೆ.
‘ನೆಹರು ಅವರು ಕನಿಷ್ಠ 14 ನಿಮಿಷ ಜೈಲಿನಲ್ಲಿದ್ದಿದ್ದರೂ ನಾನು ಅವರನ್ನು ವೀರ ಎಂದು ಕರೆಯಲು ಬಯಸುತ್ತೇನೆ. ಸಾವರ್ಕರ್ 14 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು’ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ಹಿಂದೆ ಸಾವರ್ಕರ್ ಸೇರಿದಂತೆ ಹಿಂದುತ್ವ ನಾಯಕರ ವಿರುದ್ಧ ವ್ಯಂಗ್ಯವಾಡಿದ್ದನ್ನು ಪ್ರಸ್ತಾಪಿಸಿದ ಠಾಕ್ರೆ, ಈ ಪುಸ್ತಕದ ಒಂದು ಪ್ರತಿಯನ್ನು ರಾಹುಲ್ ಅವರಿಗೂ ನೀಡಬೇಕು ಎಂದೂ ಹೇಳಿದ್ದಾರೆ.