ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಎಪಿ ನಾಯಕರೊಂದಿಗೆ ಭಾನುವಾರ ಬಿಜೆಪಿ ಕಚೇರಿಗೆ ನಡಿಗೆ: ಅರವಿಂದ ಕೇಜ್ರಿವಾಲ್

Published 18 ಮೇ 2024, 13:21 IST
Last Updated 18 ಮೇ 2024, 13:21 IST
ಅಕ್ಷರ ಗಾತ್ರ

ನವದೆಹಲಿ: ‘ನಾನು ಮತ್ತು ಎಎಪಿಯ ಇತರ ನಾಯಕರು ಇದೇ 19ರಂದು ಬಿಜೆಪಿಯ ಪ್ರಧಾನ ಕಚೇರಿಗೆ ನಡಿಗೆ ಮೂಲಕ ಸಾಗುತ್ತೇವೆ. ಆಗ ಪ್ರಧಾನಿ ಅವರು ನಮ್ಮಲ್ಲಿ ಯಾರನ್ನಾದರೂ ಜೈಲಿಗೆ ಕಳುಹಿಸುವ ಧೈರ್ಯ ತೋರಲಿ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಶನಿವಾರ ಸವಾಲು ಹಾಕಿದರು.

ಎಎಪಿ ಸಂಸದ ರಾಘವ್‌ ಚಡ್ಡಾ, ದೆಹಲಿ ಸಚಿವರಾದ ಆತಿಶಿ, ಸೌರಭ್‌ ಭಾರದ್ವಾಜ್‌ ಅವರನ್ನು ಜೈಲಿಗೆ ಕಳುಹಿಸುವುದಾಗಿ ಬಿಜೆಪಿ ಬೆದರಿಸುತ್ತಿದೆ ಎಂದ ಅವರು, ‘ನಮ್ಮ ನಾಯಕರನ್ನು ಜೈಲಿಗೆ ಕಳುಹಿಸುವ ಮೂಲಕ ಪಕ್ಷವನ್ನು ಹತ್ತಿಕ್ಕಬಹುದು ಎಂದು ಭಾವಿಸಿದ್ದೀರಾ? ಪ್ರಯತ್ನಿಸಿ ನೋಡಿ’ ಎಂದು ಹೇಳಿದರು.

ಎಎಪಿ ಸಂಸದೆ ಸ್ವಾತಿ ಮಾಲಿವಾಲ್‌ ಮೇಲಿನ ಹಲ್ಲೆ ಪ್ರಕರಣದಲ್ಲಿ ತನ್ನ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಬಂಧನವಾದ ಕೆಲವೇ ಗಂಟೆಗಳಲ್ಲಿ ಕೇಜ್ರಿವಾಲ್‌ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಎಎಪಿ ನಾಯಕರಾದ ಮನೀಶ್‌ ಸಿಸೋಡಿಯಾ, ಸತ್ಯೇಂದ್ರ ಜೈನ್‌, ಸಂಜಯ್‌ ಸಿಂಗ್‌ ಅವರನ್ನು ಜೈಲಿಗೆ ಕಳುಹಿಸುವ ಆಟವಾಡುತ್ತಿದ್ದೀರಿ ಎಂದ ಅವರು, ‘ನಾನು, ನನ್ನ ಶಾಸಕರು ಮತ್ತು ಸಂಸದರೊಂದಿಗೆ ಭಾನುವಾರ ಮಧ್ಯಾಹ್ನ ಬಿಜೆಪಿ ಕಚೇರಿಗೆ ಬರುತ್ತೇನೆ. ನಮ್ಮಲ್ಲಿ ಯಾರನ್ನಾದರೂ ನೀವು ಜೈಲಿಗೆ ಕಳುಹಿಸಬಹುದು’ ಎಂದು ಅವರು ಪ್ರಧಾನಿಯನ್ನು ಉದ್ದೇಶಿಸಿ ಹೇಳಿದರು.

‘ನೀವು ಎಎಪಿಯ ಎಷ್ಟು ನಾಯಕರನ್ನು ಜೈಲಿಗೆ ಅಟ್ಟಿದರೂ ದೇಶದಲ್ಲಿ ನೂರಾರು ಪಟ್ಟು ನಾಯಕರು ಹುಟ್ಟು ಪಡೆಯುತ್ತಾರೆ’ ಎಂದು ಕೇಜ್ರಿವಾಲ್‌ ತಿಳಿಸಿದರು.

ಬಿಜೆಪಿ ಮಾಡದ ಕಾರ್ಯಗಳನ್ನು ಎಎಪಿ ಮಾಡಿದೆ. ದೆಹಲಿಯಲ್ಲಿ ತನ್ನ ಸರ್ಕಾರ ಉತ್ತಮ ಶಾಲೆಗಳನ್ನು ನಿರ್ಮಿಸಿದೆ. ಮೊಹಲ್ಲಾ ಚಿಕಿತ್ಸಾಲಯಗಳನ್ನು ಸ್ಥಾಪಿಸಿ, ಉಚಿತ ಚಿಕಿತ್ಸೆ ಒದಗಿಸುತ್ತಿದೆ. ನಗರದಲ್ಲಿ 24 ಗಂಟೆಯೂ ಉಚಿತ ವಿದ್ಯುತ್‌ ಪೂರೈಕೆಯನ್ನು ಖಾತರಿಪಡಿಸಲಾಗಿದೆ. ಇವೆಲ್ಲ ಬಿಜೆಪಿಗೆ ಸಹಿಸಲಾಗುತ್ತಿಲ್ಲ ಎಂದು ಅವರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT