ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟ (WFI)ದ ಅಡ್ಹಾಕ್ ಸಮಿತಿ ಮತ್ತು ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಎರಡು ಪ್ರತ್ಯೇಕ ಪಂದ್ಯಾವಳಿಗಳನ್ನು ಆಯೋಜಿಸಿದ್ದು, ಇದು ಕುಸ್ತಿಪಟುಗಳನ್ನು ಇಕ್ಕಟ್ಟಿಗೆ ಸಿಲುಕಿಸಿವೆ.
ಅಡ್ಹಾಕ್ ಸಮಿತಿಯು ಜೈಪುರದಲ್ಲಿ ಫೆ. 2ರಿಂದ 5ರವರೆಗೆ ಕುಸ್ತಿ ಪಂದ್ಯಾವಳಿ ಆಯೋಜಿಸಿದೆ. ಮತ್ತೊಂದೆಡೆ ಬ್ರಿಜ್ ಭೂಷಣ್ ಅನುಯಾಯಿಗಳು ಪುಣೆಯಲ್ಲಿ ಜ. 29ರಂದು ಪಂದ್ಯಾವಳಿ ಆಯೋಜಿಸಿದ್ದಾರೆ.
ಹಿರಿಯರ ರಾಷ್ಟ್ರಮಟ್ಟದ ಪಂದ್ಯಾವಳಿಯನ್ನು ಫೆ. 2ರಿಂದ 5ರವರೆಗೆ ನಡೆಸುವುದಾಗಿ ಡಬ್ಲೂಎಫ್ಐನ ಅಡ್ ಹಾಕ್ ಸಮಿತಿ ಕಳೆದ ತಿಂಗಳು ಘೋಷಿತ್ತು. ಭೂಪೀಂದರ್ ಸಿಂಗ್ ಬಾಜ್ವಾ ನೇತೃತ್ವದ ಸಮಿತಿಯು ಈ ಪಂದ್ಯಾವಳಿ ಆಯೋಜಿಸಿದ್ದು, ಇದರಲ್ಲಿ ಹಿರಿಯರ ಫ್ರೀ ಸ್ಟೈಲ್, ಗ್ರೆಕೋ ರೋಮನ್ ಮತ್ತು ಮಹಿಳೆಯರ ವಿಭಾಗದ ಪಂದ್ಯಗಳು ನಡೆಯಲಿವೆ.
ಅಡ್ಹಾಕ್ ಸಮಿತಿ ಆಯೋಜಿಸಿರುವ ಪಂದ್ಯದಲ್ಲೇ ಭಾಗವಹಿಸುವಂತೆ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲ್ಲಿಕ್ ಸಲಹೆ ನೀಡಿದ್ದಾರೆ. ಈ ಕುರಿತ ವಿಡಿಯೊ ಸಂದೇಶವನ್ನು ಅವರು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.