ಪಟ್ನಾ: ಕೇಂದ್ರದಲ್ಲಿ ಬಿಜೆಪಿಯೇತರ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದರೆ ತಮ್ಮ ರಾಜ್ಯವೂ ಸೇರಿ ಹಿಂದುಳಿದ ಎಲ್ಲ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ ಭರವಸೆ ನೀಡಿದ್ದಾರೆ.
ಕಳೆದ ತಿಂಗಳು ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡ ಜೆಡಿಯು ನಾಯಕ ಕುಮಾರ್, ಸಮಾರಂಭವೊಂದರಲ್ಲಿ ಭಾಗವಹಿಸಿದ ಬಳಿಕ ಪತ್ರಕರ್ತರ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ.
‘ಒಂದು ವೇಳೆ ಕೇಂದ್ರದಲ್ಲಿ ಸರ್ಕಾರ ನಡೆಸುವ ಅವಕಾಶ ನಮಗೆ ಸಿಕ್ಕಿದರೆ, ಹಿಂದುಳಿದ ಎಲ್ಲ ರಾಜ್ಯಗಳು ಖಂಡಿತವಾಗಿಯೂ ವಿಶೇಷ ವರ್ಗದ ಸ್ಥಾನಮಾನ ಪಡೆಯಲಿವೆ’ ಎಂದು ಅವರು ಹೇಳಿದರು.
ಎನ್ಡಿಎ ಮೈತ್ರಿಯಿಂದ ಹೊರ ಬಂದ ನಂತರ ಬಿಹಾರದಲ್ಲಿ ಆರ್ಜೆಡಿ, ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸೇರಿ ಏಳು ಪಕ್ಷಗಳ ಮಹಾಮೈತ್ರಿ ಸರ್ಕಾರವನ್ನು ಜೆಡಿಯು ನಾಯಕ ನಿತೀಶ್ ಕುಮಾರ್ ಮುನ್ನಡೆಸುತ್ತಿದ್ದಾರೆ.