ನಾಗಪುರ (ಮಹಾರಾಷ್ಟ್ರ): ‘ಹುಡುಗಿಯೊಬ್ಬಳು ನನ್ನ ಹೃದಯ ಕದ್ದಿದ್ದಾಳೆ, ದಯವಿಟ್ಟು ಆ ಹೃದಯವನ್ನು ಹುಡುಕಿಕೊಡಿ’ ಎಂದು ಯುವಕನೊಬ್ಬ ಪೊಲೀಸರಿಗೆ ದೂರು ನೀಡಿದ್ದಾನೆ!
ಕಳವಾದ ವಸ್ತುಗಳನ್ನು ಹುಡುಕಿಕೊಡುವಂತೆ ಒತ್ತಾಯಿಸಿ ಪೊಲೀಸರಿಗೆ ದೂರುಗಳು ಬರುವುದು ಸಹಜ. ಆದರೆ, ಯುವಕನ ಈ ವಿಚಿತ್ರ ದೂರಿನಿಂದ ಅವಾಕ್ಕಾದ ಪೊಲೀಸರು ಏನು ಮಾಡಬೇಕೆಂದು ತೋಚದೆ ಮೇಲಧಿಕಾರಿಯ ಸಲಹೆ ಕೋರಿದರು.
ಈ ಕುರಿತು ಅನೌಪಚಾರಿಕವಾಗಿ ಚರ್ಚೆ ನಡೆಸಿದ ಮೇಲಧಿಕಾರಿ, ಈ ಬಗೆಯ ಪ್ರಕರಣ ದಾಖಲಿಸಿಕೊಳ್ಳಲು ಭಾರತೀಯ ಕಾನೂನಿನಲ್ಲಿ ಯಾವುದೇ ಕಾಯ್ದೆ ಇಲ್ಲ ಎಂಬ ಅಭಿಪ್ರಾಯಕ್ಕೆ ಬಂದರು. ಬಳಿಕ, ನಿನ್ನ ದೂರಿಗೆ ನಮ್ಮ ಬಳಿ ಪರಿಹಾರ ಇಲ್ಲ ಎಂದು ತಿಳಿಸಿ ಪೊಲೀಸರು ಯುವಕನನ್ನು ಸಾಗಹಾಕಿದರು.
ಕಳವಾಗಿದ್ದ ₹82 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ, ಪೊಲೀಸ್ ಆಯುಕ್ತ ಭೂಷಣ್ ಕುಮಾರ್ ಉಪಾಧ್ಯಾಯ ಈ ಪ್ರಕರಣವನ್ನು ಹಂಚಿಕೊಂಡರು.
‘ಕಳವಾದ ವಸ್ತುಗಳನ್ನು ನಾವು ಮರಳಿ ದೊರಕಿಸಿಕೊಡಬಹುದು. ಆದರೆ, ಕೆಲವೊಮ್ಮೆ ನಾವು ಪರಿಹರಿಸಲಾಗದಂತಹ ದೂರುಗಳೂ ನಮಗೆ ಬರುತ್ತವೆ’ ಎಂದು ನಗುತ್ತಾ, ಯುವಕನ ಬೇಡಿಕೆ ಉದಾಹರಿಸಿದರು.