ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಶೆ ಕಾರು ಅಪಘಾತದ ಹೊಣೆ ಹೊರುವಂತೆ ಚಾಲಕನಿಗೆ ಬೆದರಿಕೆ: ಪೊಲೀಸ್ ಆಯುಕ್ತ

Published 25 ಮೇ 2024, 10:58 IST
Last Updated 25 ಮೇ 2024, 10:58 IST
ಅಕ್ಷರ ಗಾತ್ರ

ಪುಣೆ: ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಬಾಲಕನ ತಂದೆ ಮತ್ತು ಅಜ್ಜ ತಮ್ಮ ಕುಟುಂಬದ ಚಾಲಕನಿಗೆ ಅಪಘಾತದ ಹೊಣೆ ಹೊರುವಂತೆ ಬೆದರಿಕೆ ಹಾಕಿದ್ದರು. ಅಲ್ಲದೇ ನಗದು ಮತ್ತು ಉಡುಗೊರೆಗಳನ್ನು ನೀಡಿದ್ದರು ಎಂದು ಪುಣೆ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್‌ ಹೇಳಿದ್ದಾರೆ.

'ಅಪಘಾತ ಸಂಭವಿಸಿದಾಗ ತಾನು ಕಾರನ್ನು ಓಡಿಸುತ್ತಿರಲಿಲ್ಲ. ಬಾಲಕನ ಸಂಬಂಧಿಕರು ಒತ್ತಡ ಹೇರಿ ಅಪಘಾತದ ಹೊಣೆ ಹೊರುವಂತೆ ಬೆದರಿಕೆ ಹಾಕಿದ್ದರು ಎಂದು ಕುಟುಂಬದ ಚಾಲಕ ಹೇಳಿಕೆ ನೀಡಿದ್ದಾರೆ. ಚಾಲಕ ಮತ್ತು ಅವರ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಲಾಗುವುದು' ಎಂದು ಕುಮಾರ್ ತಿಳಿಸಿದ್ದಾರೆ.

ಮೇ 19ರಂದು ಅಪಘಾತ ನಡೆದ ಸಮಯದಲ್ಲಿ ಬಾಲಕ ಕಾರು ಚಾಲನೆ ಮಾಡುತ್ತಿರಲಿಲ್ಲವೆಂದು ಬಿಂಬಿಸಲು ಪ್ರಯತ್ನಿಸಿದ್ದಕ್ಕೆ ಸಂಬಂಧಿಸಿ ಬಾಲಕನ ಅಜ್ಜನನ್ನು ಬಂಧಿಸಲಾಗಿದೆ. ಬಾಲಕನ ಅಜ್ಜನ ವಿರುದ್ಧ ಐಪಿಸಿ ಸೆಕ್ಷನ್‌ 365 ಮತ್ತು 368 ಅಡಿಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ.

ಪ್ರಕರಣ ಸಂಬಂಧ ಶುಕ್ರವಾರ ಮಾತನಾಡಿದ್ದ ಅಮಿತೇಶ್ ಕುಮಾರ್, ‘ಪ್ರಕರಣ ದಾಖಲಿಸಿಕೊಳ್ಳುವಾಗ ಕೆಲವು ಪೊಲೀಸರು ಲೋಪ ಎಸಗಿರುವುದು ತನಿಖೆಯಿಂದ ತಿಳಿದು ಬಂದಿದೆ. ಈ ಕುರಿತು ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಪ್ರಕರಣದ ತನಿಖೆಯನ್ನು ಯರವಾಡ ಠಾಣೆಯಿಂದ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ’ ಎಂದು ತಿಳಿಸಿದ್ದರು.

‘ಇತ್ತೀಚೆಗೆ ಪುಣೆಯ ಕಲ್ಯಾಣಿನಗರ ಪ್ರದೇಶದಲ್ಲಿ ಪೋಶೆ ಕಾರು ಬೈಕಿಗೆ ಡಿಕ್ಕಿ ಹೊಡೆದು, ಮಧ್ಯಪ್ರದೇಶ ಮೂಲದ ಇಬ್ಬರು ಟೆಕಿಗಳು ಮೃತಪಟ್ಟಿದ್ದರು. ಅಪಘಾತ ನಡೆದಾಗ ಬಾಲಕ ಕಾರು ಚಾಲನೆ ಮಾಡುತ್ತಿದ್ದ ಎಂಬುದು ಸ್ಪಷ್ಟವಾಗಿ ಗೊತ್ತಾಗಿದೆ. ನಾವು ಈಗಾಗಲೇ ಎಲ್ಲ ಪುರಾವೆಗಳನ್ನು ಸಂಗ್ರಹಿಸಿದ್ದೇವೆ. ಬಾಲಕ ಮನೆಯಿಂದ ಹೊರಬರುವಾಗ ಆತ ಕಾರಿನೊಂದಿಗೆ ಮನೆಯಿಂದ ಹೊರಬಂದಿರುವುದು ಭದ್ರತಾ ರಿಜಿಸ್ಟರ್‌ನಲ್ಲಿ ದಾಖಲಾಗಿದೆ’ ಎಂದಿದ್ದರು.

‘ಕಾರನ್ನು ಬಾಲಕನೇ ಚಾಲನೆ ಮಾಡುತ್ತಿದ್ದ ಎನ್ನುವುದು ತಾಂತ್ರಿಕ ಸಾಕ್ಷ್ಯಗಳು ಮತ್ತು ಸಿ.ಸಿ.ಟಿ.ವಿ. ಕ್ಯಾಮೆರಾಗಳ ದೃಶ್ಯಗಳಿಂದ ದೃಢಪಟ್ಟಿದೆ. ಅಪಘಾತ ನಡೆದಾಗ ಬಾಲಕ ಡ್ರೈವಿಂಗ್‌ ಸೀಟಿನಲ್ಲಿದ್ದದ್ದನ್ನು ಪ್ರತ್ಯಕ್ಷದರ್ಶಿಗಳು ಸಹ ದೃಢಪಡಿಸಿದ್ದಾರೆ’ ಎಂದು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT