ಪಾಲನ್ಪುರ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸಿದ ಜನರು ದೇಶಕ್ಕೆ ದ್ರೋಹ ಬಗೆದಿದ್ದಾರೆ ಎಂದು ಗುಜರಾತ್ ಸಚಿವ ಜಗದೀಶ ವಿಶ್ವಕರ್ಮ ಶನಿವಾರ ಆರೋಪಿಸಿದ್ದಾರೆ.
ಗುಜರಾತ್ನ ವಡ್ಗಾಮ್ ಕ್ಷೇತ್ರದಲ್ಲಿ ಸತತ ಎರಡನೇ ಬಾರಿ ಕಾಂಗ್ರೆಸ್ ಗೆಲುವು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಮತದಾರರ ವಿರುದ್ಧ ಸಚಿವರು ಆಕ್ರೋಶ ಹೊರ ಹಾಕಿದರು.
ವಡ್ಗಾಮ್ ಕ್ಷೇತ್ರದಲ್ಲಿ ತಮ್ಮ ಹುಟ್ಟುರಾದ ವರ್ಣವಾಡದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಬಿಜೆಪಿ ವಿರುದ್ಧ ಮತ ಚಲಾಯಿಸಿದವರೆಲ್ಲರೂ ದೇಶಕ್ಕೆ ದ್ರೋಹ ಮಾಡಿದ್ದಾರೆ. ಇಂದಿನ ಆತ್ಮೀಯ ಸ್ವಾಗತದ ಬದಲು ನೀವು ಪಕ್ಷಕ್ಕೆ ಮತ ಹಾಕಿದ್ದರೆ ನಾನು ಹೆಚ್ಚು ಖುಷಿಪಡುತ್ತಿದ್ದೆ ಎಂದು ಹೇಳಿದರು.
ಶಾಸಕರು ಆಡಳಿತ ಪಕ್ಷದಿಂದ ಗೆದ್ದು ಬಂದರೆ ಮಾತ್ರ ಪ್ರಾದೇಶಿಕ ಅಭಿವೃದ್ಧಿ ಸಾಧ್ಯ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.