ಭೂಮಿ ಮತ್ತು ಚಂದ್ರನ ಚಿತ್ರದ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಆದಿತ್ಯ ಎಲ್-1, ಯುಪಿಐ ಬಳಸಿ ಹಣ ನೀಡುವ ಎಟಿಎಂ; ನಗದು ಪಡೆಯಲು ಇನ್ನು ಬೇಕಿಲ್ಲ ಡೆಬಿಟ್ ಕಾರ್ಡ್, ಭಾರತ್ ಜೋಡೊಗೆ ವರ್ಷದ ಸಂಭ್ರಮ; ಭಾರತ ಒಂದಾಗುವವರೆಗೂ ಯಾತ್ರೆ ಮುಂದುವರಿಯಲಿದೆ ಎಂದ ರಾಹುಲ್ ಗಾಂಧಿ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ
ಸೂರ್ಯನ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಕೈಗೊಂಡಿರುವ ಆದಿತ್ಯ ಎಲ್-1 ಬಾಹ್ಯಾಕಾಶ ನೌಕೆ, ಸೆಲ್ಫಿ ಕ್ಲಿಕ್ಕಿಸಿದೆ. ಇದರ ಜೊತೆಗೆ ಭೂಮಿ ಮತ್ತು ಚಂದ್ರನ ಚಿತ್ರಗಳನ್ನು ಹಂಚಿಕೊಂಡಿದೆ.
ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಬಳಸಿ ಸ್ಮಾರ್ಟ್ಫೋನ್ಗಳ ನಡುವೆ ಸಾಧಿಸುವ ಸಂವಹನದಿಂದ ಹಣ ವರ್ಗಾವಣೆ ಮಾಡುವುದು ಗೊತ್ತೇ ಇದೆ. ಆದರೆ ಇದೇ ಮೊದಲ ಬಾರಿಗೆ ಎಟಿಎಂ ಕಾರ್ಡ್ ಇಲ್ಲದೆ ಯುಪಿಐ ಬಳಸಿ ಯಂತ್ರದಿಂದ ಹಣ ಪಡೆಯುವ ಪ್ರಯತ್ನವೊಂದು ಗ್ಲೋಬಲ್ ಫಿಂಟೆಕ್ ಫೆಸ್ಟ್ನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ.
ದ್ವೇಷ ತೊಲಗುವವರೆಗೆ.. ಭಾರತ ಒಂದಾಗುವವರೆಗೆ ಯಾತ್ರೆ ಮುಂದುವರಿಯಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಳೆದ ವರ್ಷ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸಿದ ಭಾರತ್ ಜೋಡೊ ಯಾತ್ರೆಗೆ ಗುರುವಾರ ಒಂದು ವರ್ಷವಾಗಿದೆ.
ಸನಾತನ ಧರ್ಮ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆ ಕುರಿತಂತೆ ಭಾರಿ ವಿವಾದ ತಲೆ ಎತ್ತಿರುವ ನಡುವೆಯೇ ಡಿಎಂಕೆ ಸಂಸದ ಎ ರಾಜಾ ಸನಾತನ ಧರ್ಮವನ್ನು ಎಚ್ಐವಿ ಮತ್ತು ಕುಷ್ಠರೋಗದಂತಹ ರೋಗಗಳಿಗೆ ಹೋಲಿಕೆ ಮಾಡಿದ್ದಾರೆ ಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ.
‘ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ಅಪ್ಪ, ಅಮ್ಮನಿಗೆ ಹುಟ್ಟಿದ್ದೇನೆ’ ಎಂಬ ಚಿತ್ರನಟ ಪ್ರಕಾಶ ರಾಜ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ, ‘ಪ್ರಕಾಶ ರಾಜ್ ಅವರು ಅಪ್ಪ, ಅಮ್ಮನಿಗೇ ಹುಟ್ಟಿರುವುದಕ್ಕೆ ಗ್ಯಾರಂಟಿ ಏನು’ ಎಂದು ಪ್ರಶ್ನಿಸಿದರು.
‘ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ. ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸ್ಪಷ್ಟಪಡಿಸಿದ್ದಾರೆ.
ಮಣಿಪುರದ ಐದು ಕಣಿವೆ ಜಿಲ್ಲೆಗಳಲ್ಲಿ ಕರ್ಫ್ಯೂ ಘೋಷಣೆ ಮಾಡಿದ ಮರುದಿನವೇ, ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಜನರಿಗೆ ಆಹಾರ, ಔಷಧ ಸೇರಿ ಅಗತ್ಯ ವಸ್ತುಗಳು ಖರೀದಿಗೆ ಅವಕಾಶ ನೀಡುವ ಸಲುವಾಗಿ ಬೆಳಿಗ್ಗೆ 5 ರಿಂದ ಸಂಜೆ 6ರವರೆಗೆ ಕರ್ಪ್ಯೂ ಸಡಿಲಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸನಾತನ ಧರ್ಮದ ಬಗೆಗಿನ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ತಕ್ಕ ಪ್ರತ್ಯುತ್ತರ ನೀಡಿ ಎಂಬ ಪ್ರಧಾನಿ ಅವರ ಕರೆ ಅತ್ಯಂತ ಪ್ರಚೋದನಕಾರಿಯಾಗಿದ್ದು, ಈ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿದ್ದ ಉದಯನಿಧಿ ಸ್ಟಾಲಿನ್ ಈಗ ನೇರವಾಗಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಕೇಸರಿ ಪಕ್ಷದ ನಾಯಕರು ನನ್ನ ಹೇಳಿಕೆಗಳನ್ನು ತಿರುಚುತ್ತಿದ್ದಾರೆ ಎಂದು ದೂರಿದ ಅವರು, ನನ್ನ ವಿರುದ್ಧ ದಾಖಲಾಗಿರುವ ಮೊಕದ್ದಮೆಗಳನ್ನು ಕಾನೂನುಬದ್ಧವಾಗಿ ಎದುರಿಸಿಲು ಸಿದ್ಧ ಎಂದಿದ್ದಾರೆ.
ಗಣಿಯೊಳಗೆ ಸಿಲುಕಿದ 65 ಕಾರ್ಮಿಕರ ರಕ್ಷಣೆಯ ಕಥೆಯುಳ್ಳ ಅಕ್ಷಯ್ ಕುಮಾರ್ ನಟನೆಯ ‘ಮಿಷನ್ ರಾಣಿಗಂಜ್: ದಿ ಗ್ರೇಟ್ ಇಂಡಿಯಾ ರೆಸ್ಕ್ಯೂ’ ಚಿತ್ರದಲ್ಲಿದ್ದ ‘ಇಂಡಿಯಾ’ ಪದವನ್ನು ಈಗ ‘ಭಾರತ್’ ಎಂದು ಬದಲಿಸಿರುವ ಸಂಗತಿ ಈಗ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.