ಬೆಂಗಳೂರು: ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಿದಂತೆ ವರ್ಷದಿಂದ ವರ್ಷಕ್ಕೆ ವಂಚನೆ ಪ್ರಮಾಣವೂ ಏರಿಕೆ ಕಂಡಿದೆ.
2023ರಲ್ಲಿ ರಾಜ್ಯದ ಜನರು ₹465 ಕೋಟಿ ಕಳೆದುಕೊಂಡಿದ್ದಾರೆ. ಒಂದು ದಿನದಲ್ಲಿ ಸರಾಸರಿ ₹ 1.27 ಕೋಟಿ ವಂಚನೆಯಾಗಿದೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2021ಕ್ಕೆ ಹೋಲಿಸಿದರೆ, 2023ರಲ್ಲಿ ವಂಚನೆ ಪ್ರಕರಣಗಳ ಸಂಖ್ಯೆ ಶೇ 400ರಷ್ಟು ಏರಿಕೆ ಕಂಡಿದೆ. 2021ರಲ್ಲಿ ₹84 ಕೋಟಿ ಹಾಗೂ 2022ರಲ್ಲಿ ₹185 ಕೋಟಿ ವಂಚನೆ ನಡೆದಿತ್ತು.
ರಾಜ್ಯದ ವಿವಿಧ ಸೈಬರ್ ಪೊಲೀಸ್ ಠಾಣೆಗಳಲ್ಲಿ ಕಳೆದ ವರ್ಷ 21,868 ಪ್ರಕರಣಗಳು ದಾಖಲಾಗಿದ್ದರೆ, ಬೆಂಗಳೂರು ನಗರವೊಂದರಲ್ಲೇ 17,623 ಪ್ರಕರಣಗಳು ದಾಖಲಾಗಿದ್ದವು. ರಾಜ್ಯದ ಇತರೆ ಜಿಲ್ಲೆಗಳಲ್ಲಿ 4 ಸಾವಿರ ಪ್ರಕರಣಗಳು ದಾಖಲಾಗಿವೆ.
ಸೈಬರ್ ವಂಚಕರು ಹೊಸ ಹೊಸ ವಿಧಾನಗಳ ಮೂಲಕ ಹಣ ಲಪಟಾಯಿಸುತ್ತಿದ್ದು, ಆರೋಪಿಗಳ ಪತ್ತೆಯೂ ಸವಾಲಿನಿಂದ ಕೂಡಿದೆ.
‘ಹೂಡಿಕೆ, ಫಿಶಿಂಗ್ (ಗಾಳ), ಕೊರಿಯರ್ ಸೇವೆ ಹೆಸರಿನಲ್ಲಿ ಹೆಚ್ಚು ವಂಚನೆ ಪ್ರಕರಣಗಳು ನಡೆಯುತ್ತಿವೆ’ ಎಂದು ಸಿಐಡಿ ಮುಖ್ಯಸ್ಥ ಎಂ.ಎ.ಸಲೀಂ ಮಾಹಿತಿ ನೀಡಿದರು.
‘ಕಳೆದ ವರ್ಷದ ಆರಂಭದಲ್ಲಿ ಒಟಿಪಿ ಪಡೆದು ಹಣ ವಂಚಿಸುತ್ತಿದ್ದರು. ಆರು ತಿಂಗಳ ನಂತರ ಮುಂಬೈ ಸೇರಿದಂತೆ ದೇಶ ಇತರೆ ಮಹಾನಗರಗಳಿಂದ ಸೈಬರ್ ವಂಚಕರು ಪೊಲೀಸರ ಸೋಗಿನಲ್ಲಿ ಕರೆ ಮಾಡಿ ವಂಚನೆ ಮಾಡುತ್ತಿದ್ದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
70 ವರ್ಷದ ಪತ್ರಕರ್ತೆಯೊಬ್ಬರಿಗೆ ‘ಫೆಡೆಕ್ಸ್ ಕೊರಿಯರ್’ ಹೆಸರಿನಲ್ಲಿ ₹1.1 ಕೋಟಿ ವಂಚಿಸಲಾಗಿತ್ತು. ಅವರನ್ನು ಡಿಜಿಟಲ್ ದಿಗ್ಬಂಧನಕ್ಕೂ ಸಹ ಒಳಪಡಿಸಿದ್ದ ಸೈಬರ್ ವಂಚಕರು ಹಣ ಪಡೆದುಕೊಂಡಿದ್ದರು.