ರಾಮನಗರ: ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ವೇ ಟೋಲ್ ದರ ಹೆಚ್ಚಳವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶನಿವಾರ ಹಿಂಪಡೆದಿದೆ.
ಟೋಲ್ ದರವನ್ನು ಶನಿವಾರದಿಂದ (ಏ.1) ಅನ್ವಯವಾಗುವಂತೆ ಶೇ 22ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿತ್ತು.
ವಾಹನಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಕನಿಷ್ಠ ₹ 35ರಿಂದ ಗರಿಷ್ಠ ₹350ರವರೆಗೆ ಟೋಲ್ ಶುಲ್ಕ ಏರಿತ್ತು. ಶುಕ್ರವಾರ ಮಧ್ಯರಾತ್ರಿಯಿಂದಲೇ ಟೋಲ್ ಸಿಬ್ಬಂದಿ ಪರಿಷ್ಕೃತ ದರ ಸಂಗ್ರಹ ಮಾಡಲು ಆರಂಭಿಸಿದರು.
ಶನಿವಾರ ಬೆಳಿಗ್ಗೆ 10 ಗಂಟೆವರೆಗೆ ಹೊಸ ದರವನ್ನೇ ವಸೂಲಿ ಮಾಡಲಾಗುತ್ತಿತ್ತು. ನಂತರದಲ್ಲಿ ಮಾಧ್ಯಮಗಳು ಸ್ಥಳಕ್ಕೆ ಬಂದ ಬಳಿಕ ಸಿಬ್ಬಂದಿ ಟೋಲ್ನಲ್ಲಿ ಹಾಕಿದ್ದ ಹೊಸ ದರಪಟ್ಟಿ ಕಿತ್ತು ಹಾಕಿ ಹಳೇ ದರವನ್ನೇ ಸಂಗ್ರಹ ಮಾಡಲು ಆರಂಭಿಸಿದರು.
ಜನಾಭಿಪ್ರಾಯಕ್ಕೆ ಮಣಿದು ದರ ಪರಿಷ್ಕರಣೆ ಆದೇಶ ಹಿಂಪಡೆದಿರುವುದಾಗಿ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ಟೋಲ್ ಎರಡು ವಾರದ ಅಂತರದಲ್ಲೇ ಟೋಲ್ ದರ ಏರಿಸಿದ್ದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಧಾನಿ ಮೋದಿ ಮಾರ್ಚ್ 12ರಂದು ಹೆದ್ದಾರಿ ಉದ್ಘಾಟಿಸಿದ್ದರು. 14ರಿಂದ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಮಿಣಕಿ, ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹ ಆರಂಭಗೊಂಡಿತ್ತು.