ಬೆಂಗಳೂರು: 'ತಮಿಳುನಾಡು ರಾಜ್ಯ ಕಾವೇರಿ ನೀರನ್ನು ಎಷ್ಟು ಬಳಸಿಕೊಂಡಿದೆ ಎಂದು ವಾದ ಮಾಡದೇ ರಾಜ್ಯ ಸರ್ಕಾರ ನಮ್ಮ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದ ಅಪೊಲೊ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
‘ಸೆಪ್ಟೆಂಬರ್ 6 ರಂದು ಕಾವೇರಿ ನದಿ ನೀರಿನ ಹಂಚಿಕೆ ಕುರಿತು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ಕಾವೇರಿ ವಿಚಾರದಲ್ಲಿ ಸಿಡಬ್ಲ್ಯೂಎಂಎ ಆದೇಶದಂತೆ ನೀರು ಬಿಡುತ್ತಿದ್ದಾರೆ. ನಮ್ಮವರು ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದಿರುವ ಬಗ್ಗೆ ಸಮಗ್ರವಾಗಿ ಏಕೆ ವಾದ ಮಾಡುತ್ತಿಲ್ಲವೊ ಗೊತ್ತಿಲ್ಲ. ಕಾವೇರಿ ಜಲಾನಯನ ಪ್ರದೇಶದಲ್ಲಿ ಎಷ್ಟು ಮಳೆ ಬಿದ್ದಿದೆ ಎನ್ನುವುದನ್ನು ಮನವರಿಕೆ ಮಾಡಿಕೊಂಡು ನಿರ್ಧಾರ ತೆಗೆದುಕೊಳ್ಳಬೇಕು’ ಎಂದರು.
‘ಸೆ.6 ಕ್ಕೆ ವಿಚಾರಣೆ ಇರುವುದರಿಂದ ಅಲ್ಲಿಯವರೆಗೆ ನೀರು ಹರಿಯುತ್ತದೆ. ಮೊದಲು ನೀರು ಹರಿಸುವುದನ್ನು ನಿಲ್ಲಿಸಿ ಆ ಮೇಲೆ ವಾದ ಮಾಡಬೇಕು. ನಮ್ಮ ರಾಜ್ಯದ ರೈತರ ಹಿತಾಸಕ್ತಿ ಕಾಪಾಡುವುದು ಮುಖ್ಯ’ ಎಂದರು.
‘ರಾಜ್ಯ ಸರ್ಕಾರ ತಮಿಳುನಾಡು ಎಷ್ಟು ನೀರು ಬಳಕೆ ಮಾಡಿದೆ ಅಂತ ವಾದ ಮಾಡಲು ತಯಾರಿಲ್ಲ. ನಾವು ರೈತರನ್ನು ಇಕ್ಕಟಿಗೆ ಸಿಲುಕಿಸಿಲ್ಲ. ಸರ್ಕಾರವೇ ರೈತರನ್ನು ಇಕ್ಕಟಿಗೆ ಸಿಲುಕಿಸಿದೆ’ ಎಂದು ಕುಟುಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.