ಬೆಂಗಳೂರು: ಲೋಕಸಭೆ ಚುನಾವಣೆಗೆ ಮುನ್ನವೇ ಪಕ್ಷದ ಕಾರ್ಯಕರ್ತರನ್ನು ವಿವಿಧ ನಿಗಮ–ಮಂಡಳಿ, ಅಕಾಡೆಮಿ, ಆಯೋಗಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ನೇಮಕ ಮಾಡಲಾಗಿದೆ.
ವಿಧಾನಸಭೆ ಚುನಾವಣೆ ವೇಳೆ ಅನೇಕ ಕ್ಷೇತ್ರಗಳಲ್ಲಿ ಹಲವು ಆಕಾಂಕ್ಷಿಗಳಿದ್ದರು. ಆ ಪೈಕಿ ಗೆಲ್ಲುವವರು ಹಲವರಿದ್ದರು. ಯಾರದ್ದೋ ಒತ್ತಡ, ಪ್ರಭಾವಗಳಿಂದ ಕೆಲವರಿಗೆ ಟಿಕೆಟ್ ಕೈತಪ್ಪಿತ್ತು.
ಟಿಕೆಟ್ ಕೈತಪ್ಪಿದ ಕೆಲವರಿಗೆ ನಿಗಮ–ಮಂಡಳಿಯಲ್ಲಿ ಅವಕಾಶ ಕಲ್ಪಿಸುವುದಾಗಿ ಪಕ್ಷದ ನಾಯಕರು ಭರವಸೆ ನೀಡಿದ್ದರು. ಅವರಿಗೆ ಈಗ ಅವಕಾಶ ಲಭಿಸಿದೆ.
ಮೈಲ್ಯಾಕ್ (ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ) ಅಧ್ಯಕ್ಷ ಸ್ಥಾನಕ್ಕೆ ನೇಮಕವಾಗಿದ್ದ ಅಯೂಬ್ ಖಾನ್, ತಮಗೆ ನೀಡಿದ್ದ ಸ್ಥಾನದ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಅವರನ್ನು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ (ಕೆಇಎ) ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಹೇಳಲಾಗಿದೆ.
ವಿಧಾನಪರಿಷತ್ತಿನ ಮಾಜಿ ಸದಸ್ಯರಾಗಿದ್ದ ಶ್ರೀನಿವಾಸ್ ಹಾಗೂ ಸೋಮಣ್ಣ ಬೇವಿನಮರದ ಅವರಿಗೂ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಬಹುತೇಕ ಕಾರ್ಯಕರ್ತರಿಗೆ ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರ ಅಥವಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರಗಳ (ಕಾಡಾ) ಅಧ್ಯಕ್ಷ ಸ್ಥಾನಗಳನ್ನು ನೀಡಲಾಗಿದೆ.