ಬೆಂಗಳೂರು: ‘ಸಂವಿಧಾನವನ್ನು ಬದಲಾಯಿಸುವ ಪ್ರಯತ್ನಗಳು ನಡೆಯುತ್ತಿವೆ. ಒಂದು ವೇಳೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ, ಗಟ್ಟಿಯಾಗಿ ನಿಲ್ಲದಿದ್ದರೆ ಖಂಡಿತವಾಗಿಯೂ ಮುಂದೊಂದು ದಿನ ದೇಶ ಸರ್ವಾಧಿಕಾರದತ್ತ ವಾಲಲಿದೆ. ಈ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಇಲ್ಲಿ ನಡೆದ ‘ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶ 2024’ರಲ್ಲಿ ಅವರು ಮಾತನಾಡಿದರು.
‘ಸಂವಿಧಾನವನ್ನು ಬದಲಾಯಿಸಲು ಅಥವಾ ಅಳಿಸಿಹಾಕಲು ತುಂಬಾ ಜನ ಪ್ರಯತ್ನಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನೀವು ಒಗ್ಗಟ್ಟಾಗಿ ಗಟ್ಟಿಯಾಗಿ ನಿಲ್ಲದಿದ್ದರೆ ಸಂವಿಧಾನಕ್ಕೆ ತೊಂದರೆಯಾಗಲಿದೆ. ದೇಶದಲ್ಲಿ ಏಕಾಧಿಪತ್ಯ ಇರಲಿದೆ. ನಿಮಗೆ ಏಕಚಕ್ರಾಧಿಪತ್ಯ ಬೇಕೋ, ಅಥವಾ ನ್ಯಾಯವಾಗಿ ಜೀವನ ಸಾಗಿಸಬೇಕೋ ಎನ್ನುವುದನ್ನು ನೀವೇ ನಿರ್ಧರಿಸಬೇಕು’ ಎಂದು ಖರ್ಗೆ ನುಡಿದರು.
ಸಂವಿಧಾನ ಉಳಿದರೆ, ದೇಶದ ಏಕತೆ ಉಳಿಯಲಿದೆ. ಪ್ರಜಾಪ್ರಭುತ್ವ ಉಳಿದರೆ ಎಲ್ಲರ ಅಭ್ಯುದಯ ಸಾಧ್ಯ. ಆದರೆ ಇವತ್ತು ಕೇಂದ್ರದಲ್ಲಿ ಆಡಳಿತದಲ್ಲಿರುವ ಸರ್ಕಾರವು ಸಂವಿಧಾನವನ್ನು ರಕ್ಷಿಸುತ್ತಿಲ್ಲ. ಸಂವಿಧಾನಕ್ಕೆ ಅನುಗುಣವಾಗಿ ಕೆಲಸವೂ ಮಾಡುತ್ತಿಲ್ಲ. ಹೀಗಾಗಿ ಸಂವಿಧಾನವನ್ನು ರಕ್ಷಣೆ ಮಾಡುವುದು ಮುಖ್ಯವಾಗಿದೆ. ಕೆಲವೊಂದು ಸಿದ್ಧಾಂತಗಳನ್ನು ಹೇರುವ ಮೂಲಕ ನಿಮ್ಮನ್ನು ದಾರಿತಪ್ಪಿಸುವ ಪ್ರಯತ್ನದ ಬಗ್ಗೆ ಎಚ್ಚರವಾಗಿರಬೇಕು’ ಎಂದರು.
‘ಈಗಿನ ಸಂವಿಧಾನವನ್ನು ಬದಲಾಯಿಸಿ ಹೊಸ ಸಂವಿಧಾನವನ್ನು ರಚಿಸುವ ಹುನ್ನಾರ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನವನ್ನು ರಕ್ಷಿಸುವ ಬಗ್ಗೆ ಮಾತನಾಡುತ್ತಾರೆ. ಸಂವಿಧಾನದ ರಕ್ಷಕರು ವಿರೋಧ ಪಕ್ಷಗಳ ವಿರುದ್ಧ ಜಾರಿ ನಿರ್ದೇಶನಾಲಯವನ್ನು ಯಾಕೆ ಬಳಸುತ್ತಾರೆ? ವಿರೋಧ ಪಕ್ಷಗಳು ಆಳುತ್ತಿರುವ ರಾಜ್ಯಗಳ ಶಾಸಕರನ್ನು ಯಾಕೆ ಖರೀದಿ ಮಾಡುತ್ತಾರಾ? ಕರ್ನಾಟಕ, ಮಣಿಪುರ ಹಾಗೂ ಗೋವಾದಲ್ಲಿ ಇಂತಹ ಘಟನೆ ನಡೆದಿದೆ. ಇದು ಸಂವಿಧಾನಿಕವೇ?’ ಎಂದು ಖರ್ಗೆ ಪ್ರಶ್ನಿಸಿದರು. ಅಲ್ಲದೆ ಈ ಭ್ರಾಂತಿ ಮುಂದುವರಿದರೆ ದೇಶದಲ್ಲಿ ಭವಿಷ್ಯದಲ್ಲಿ ಏಕಚಕ್ರಾಧಿಪತ್ಯ ಇರಲಿದೆ’ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ‘ಸರ್ಕಾರದ ಗ್ಯಾರಂಟಿ’ ಅಥವಾ ಕನಿಷ್ಠ ಪಕ್ಷ ‘ಬಿಜೆಪಿಯ ಗ್ಯಾರಂಟಿ’ ಎನ್ನುವ ಬದಲು ‘ನನ್ನ ಗ್ಯಾರಂಟಿ’ ಎಂದು ಹೇಳುತ್ತಾರೆ. ಮೋದಿ ಗ್ಯಾರಂಟಿ ಆಗಲು ಹೇಗೆ ಸಾಧ್ಯ? ದೇಶದ ಜನರು ತೆರಿಗೆ ಕಟ್ಟಿ ನೀಡಿದ ಹಣ, ನಿಮ್ಮದಲ್ಲ. ನಾನು ಮಾಡಿದ್ದು, ನನ್ನದು, ನಾನು.. ನಾನು.. ನಾನು.. ಎನ್ನುವ ಒಬ್ಬ ವ್ಯಕ್ತಿಯ ಹೇಳಿಕೆ ಮುಂದೊಂದು ದಿನ ದೇಶದವನ್ನು ಏಕಚಕ್ರಾಧಿಪತ್ಯದತ್ತ ಕೊಂಡೊಯ್ಯುತ್ತದೆ’ ಎಂದು ಖರ್ಗೆ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.