ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ಕೇರಳ, ತಮಿಳುನಾಡು ಗಡಿ ಜಿಲ್ಲೆಗಳಲ್ಲಿ ಎಚ್ಚರಿಕೆಗೆ ಸೂಚನೆ

Published 19 ಡಿಸೆಂಬರ್ 2023, 9:18 IST
Last Updated 19 ಡಿಸೆಂಬರ್ 2023, 9:18 IST
ಅಕ್ಷರ ಗಾತ್ರ

ಬೆಂಗಳೂರು: ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳಲ್ಲಿ ಅಗತ್ಯ ಸಂಖ್ಯೆಯಲ್ಲಿ ಕೋವಿಡ್ ಪರೀಕ್ಷೆ ನಡೆಸಿ, ವರದಿ ಸಲ್ಲಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. 

ಕೇರಳದಲ್ಲಿ ಕೊರೊನಾ ವೈರಾಣು ವಿನ ಜೆಎನ್. 1 ರೂಪಾಂತರಿ ಪತ್ತೆಯಾಗಿರುವುದರಿಂದ ಇಲಾಖೆ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದಾರೆ.

‘ಕೇರಳದಲ್ಲಿ ಕೋವಿಡ್ ಪ್ರಕರಣಗಳು ಏರಿಕೆ ಆಗುತ್ತಿರುವುದರಿಂದ ರಾಜ್ಯದಲ್ಲಿಯೂ ಮುಂಜಾಗ್ರತಾ ಕ್ರಮಗಳ ಪಾಲನೆ ಅವಶ್ಯಕ. ಗಡಿಭಾಗದ ಜಿಲ್ಲೆಗಳಲ್ಲಿ ಸರ್ವೇಕ್ಷಣೆ ಹೆಚ್ಚಿಸುವ ಮತ್ತು ನಿರ್ಬಂಧ ಹೇರುವ ಅಗತ್ಯವಿಲ್ಲ. ಸರ್ಕಾರಿ, ಖಾಸಗಿ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಎಲ್ಲ ‘ಸಾರಿ‘ ಪ್ರಕರಣಗಳು (ತೀವ್ರ ಉಸಿರಾಟದ ಸಮಸ್ಯೆ) ಹಾಗೂ ತಲಾ 20 ಐಎಲ್‌ಐ ಪ್ರಕರಣಗಳಲ್ಲಿ (ಶೀತ ಜ್ವರ ಮಾದರಿ ಅನಾರೋಗ್ಯ ಸಮಸ್ಯೆ) ಒಂದು ಪ್ರಕರಣವನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು’ ಎಂದು ತಿಳಿಸಿದ್ದಾರೆ.

‘ಕೋವಿಡ್ ಲಕ್ಷಣ ಹೊಂದಿರುವ ಅಂತರರಾಷ್ಟ್ರೀಯ ಪ್ರಯಾಣಿಕರ ಹಾಗೂ ಗುಂಪು ಗುಂಪಾಗಿ ವರದಿಯಾಗುವ ಪ್ರಕರಣಗಳಲ್ಲಿ ಸೋಂಕಿತರ ಗಂಟಲು ಹಾಗೂ ಮೂಗಿನ ದ್ರವದ ಮಾದರಿಯನ್ನು ವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆ (ಜಿನೋಮಿಕ್ ಸಿಕ್ವೆನ್ಸೀಸ್‌) ಪರೀಕ್ಷೆಗೆ ಕಳುಹಿಸಬೇಕು. ತೀವ್ರ ಸ್ವರೂಪದ ರೋಗ ಲಕ್ಷಣ ಹೊಂದಿರುವವರು, ಆಸ್ಪತ್ರೆಗೆ ದಾಖಲಾದ ಕೋವಿಡ್ ಪೀಡಿತರು, ಕೋವಿಡ್ ಮರಣ ಪ್ರಕರಣಗಳು ಹಾಗೂ ಎರಡು ಡೋಸ್ ಲಸಿಕೆ ಪಡೆದರೂ ಕೋವಿಡ್ ಪೀಡಿತರಾದವರ ಮಾದರಿಗಳನ್ನು ವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆ ಪರೀಕ್ಷೆಗೆ ಒಳಪಡಿಸಬೇಕು’ ಎಂದು ಹೇಳಿದ್ದಾರೆ. 

‘ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದೃಢಪಟ್ಟ ಕೋವಿಡ್ ಪ್ರಕರಣಗಳಲ್ಲಿ 25ಕ್ಕಿಂತ ಕಡಿಮೆ ‘ಸಿಟಿ ವ್ಯಾಲ್ಯೂ’ ಇದ್ದಲ್ಲಿ ಮಾದರಿಗಳನ್ನು ವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆ ಪರೀಕ್ಷೆಗಾಗಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಕಳುಹಿಸಬೇಕು’ ಎಂದು ತಿಳಿಸಿದ್ದಾರೆ. 

ಮುಖಗವಸು ಧರಿಸಲು ಸಲಹೆ

ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನ ಆಧಾರ 60 ವರ್ಷ ಮೇಲ್ಪಟ್ಟವರು, ಹೃದಯ, ಮೂತ್ರಪಿಂಡ ಸೇರಿ ವಿವಿಧ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರು, ಗರ್ಭಿಣಿಯರು, ಬಾಣಂತಿಯರು ಹಾಗೂ ಜ್ವರ, ಕೆಮ್ಮು ಸೇರಿ ಕೊರೊನಾ ಸೋಂಕಿನ ವಿವಿಧ ಲಕ್ಷಣ ಹೊಂದಿರುವವರು ಮುಖಗವಸು (ಮಾಸ್ಕ್‌) ಧರಿಸುವುದು ಸೂಕ್ತ ಎಂದು ಇಲಾಖೆ ಸಲಹೆ ನೀಡಿದೆ. 

44 ಹೊಸ ಪ್ರಕರಣಗಳು ದೃಢ

ರಾಜ್ಯದಲ್ಲಿ ಮಂಗಳವಾರ ಹೊಸದಾಗಿ 44 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 24 ಗಂಟೆಗಳ ಅವಧಿಯಲ್ಲಿ 722 ಪರೀಕ್ಷೆಗಳನ್ನು ನಡೆಸಲಾಗಿದೆ. ಸೋಂಕು ದೃಢ ಪ್ರಮಾಣ ಶೇ 6.09ರಷ್ಟಿದೆ. ಸದ್ಯ ರಾಜ್ಯದಲ್ಲಿ 79 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಸೋಂಕಿತರಲ್ಲಿ 62 ಮಂದಿ ಮನೆ ಆರೈಕೆಗೆ ಒಳಗಾದರೆ, 17 ಮಂದಿ ಆಸ್ಪತ್ರೆ ಚಿಕಿತ್ಸೆಗೆ ಒಳಗಾಗಿದ್ದಾರೆ. 

ಆಸ್ಪತ್ರೆ ಚಿಕಿತ್ಸೆಗೆ ಒಳಗಾದವರಲ್ಲಿ ಆರು ಮಂದಿ ಐಸಿಯು ಹಾಗೂ 11 ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇಲಾಖೆ ಹೊರಡಿಸಿರುವ ಸುತ್ತೋಲೆಯನ್ವಯದ ನಿಯಮಗಳು ಈ ಕೆಳಕಂಡಂತಿವೆ:

  • ಅನಗತ್ಯ ಗಾಬರಿಯಿಂದ ಈಗಲೇ ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳಲ್ಲಿ ತಪಾಸಣೆಯನ್ನು ಹೆಚ್ಚಿಸುವ ಅಥವಾ ನಿರ್ಬಂಧಗಳನ್ನು ಹೇರುವ ಅವಶ್ಯಕತೆಯಿಲ್ಲ.

  • ಕೇರಳ ಮತ್ತು ತಮಿಳುನಾಡು ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಭಾಗದ ಜಿಲ್ಲೆಗಳಲ್ಲಿ ಎಚ್ಚರಿಕೆಯಿಂದಿರಲು ಅಗತ್ಯ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸುವುದು ಹಾಗೂ ವರದಿ ಸಲ್ಲಿಸುವುದು ಅವಶ್ಯಕ.

  • ಸರ್ಕಾರ, ಖಾಸಗಿ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಎಲ್ಲಾ SARI ಪ್ರಕರಣಗಳು ಹಾಗೂ 20 ILI ಪ್ರಕರಣಗಳ ಪೈಕಿ ಒಂದು ILI ಪ್ರಕರಣವನ್ನು ಕೋವಿಡ್‌–19 ಪರೀಕ್ಷೆಗೆ ಒಳಪಡಿಸಬೇಕು.

ಅಲ್ಲದೆ, ಈ ಕೆಳಕಂಡ ಪ್ರಕರಣಗಳ ಮಾದರಿಗಳನ್ನು ಡಬ್ಲ್ಯುಜಿಎಸ್‌ (Whole Genome Sequencing) ಪರೀಕ್ಷೆಗೆ ರವಾನಿಸಬೇಕು ಎಂದು ಇಲಾಖೆ ಸೂಚಿಸಿದೆ.

  1. ಅಂತರರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯಿದ್ದು, ಕೋವಿಡ್‌–19 ಸೋಂಕಿನ ಲಕ್ಷಣಗಳನ್ನು ಹೊಂದಿರುವವರು

  2. ಗುಂಪು – ಗುಂಪಾಗಿ ವರದಿಯಾಗುವ ಪ್ರಕರಣಗಳು ಹಾಗೂ ಮರಣಗಳು ವರದಿಯಾಗುವ ಫೋಕಲ್‌ ಔಟ್‌ ಬ್ರೇಕ್‌ಗಳ ಸಂದರ್ಭದಲ್ಲಿ ಅಗತ್ಯ ಸಂಖ್ಯೆಯ ಮಾದರಿಗಳನ್ನು ಡಬ್ಲ್ಯುಜಿಎಸ್‌ ಪರೀಕ್ಷೆಗೆ ಕಳುಹಿಸಬೇಕು.

  3. ತೀವ್ರ ಸ್ವರೂಪದ ರೋಗ ಲಕ್ಷಣಗಳನ್ನು ಹೊಂದಿದವರು, ಆಸ್ಪತ್ರೆಗೆ ದಾಖಲಾದ ಪ್ರಕರಣಗಳು, SARI ಪ್ರಕರಣಗಳು ಹಾಗೂ ಸುದೀರ್ಘ ಅವಧಿಯವರೆಗೆ ಆಸ್ಪತ್ರೆಯಲ್ಲಿ ದಾಖಲಾದ ಪ್ರಕರಣಗಳು

  4. ಕೋವಿಡ್‌–19ರ ಮರು ಸೋಂಕಿಗೆ ಒಳಗಾದವರು

  5. ಕೋವಿಡ್‌–19 ಲಸಿಕೆಯ ಎರಡು ಡೋಸ್‌ ವ್ಯಾಕ್ಸಿನ್‌ ಪಡೆದ ನಂತರವೂ ಕೋವಿಡ್‌–19 ಸೋಂಕು ಧೃಢಪಟ್ಟವರು

  6. ಕೋವಿಡ್‌ 19ರ ಮರಣ ಪ್ರಕರಣಗಳು

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಮೇಲಿನ ಎಲ್ಲಾ ಅಂಶಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳುವಂತೆ ಬಿಬಿಎಂಪಿ ಹಾಗೂ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT