ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.15ರಂದು ಪರಿಷತ್ತಿನಲ್ಲಿ ನಡೆದದ್ದು ಏನು?

Last Updated 29 ಡಿಸೆಂಬರ್ 2020, 21:45 IST
ಅಕ್ಷರ ಗಾತ್ರ

ಬೆಂಗಳೂರು: ಉಪ ಸಭಾಪತಿಯಾಗಿದ್ದ ಧರ್ಮೇಗೌಡ ಅವರು, ಇದೇ 15ರಂದು ವಿಧಾನಪರಿಷತ್‌ನ ಒಂದು ದಿನದ ವಿಶೇಷ ಅಧಿವೇಶನದಲ್ಲಿ ನಡೆದಿದ್ದ ರಂಪಾಟದಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದರು.

ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಅವಿಶ್ವಾಸ ನೋಟಿಸನ್ನು ಬಿಜೆಪಿ ನೀಡಿತ್ತು. ವಿಶೇಷ ಅಧಿವೇಶನದಲ್ಲಿ ಅದನ್ನು ಪ್ರಸ್ತಾಪಿಸಲು ಉದ್ದೇಶಿಸಿದ್ದ ಬಿಜೆಪಿ, ಸಭಾಪತಿ ಒಳಗೆ ಬರುವ ಮೊದಲೇ ಆ ಪೀಠದಲ್ಲಿ ಉಪಸಭಾಪತಿ ಧರ್ಮೇಗೌಡ ಅವರನ್ನು ಕೂರಿಸುವ ತಂತ್ರ ರೂಪಿಸಿತ್ತು. ಧರ್ಮೇಗೌಡ ಅವರ ಮನವೊಲಿಸಿ ಸಭಾಪತಿ ಪೀಠದಲ್ಲಿ ಕೂರಿಸುವಲ್ಲಿ ಯಶಸ್ವಿಯಾಗಿತ್ತು.

ಇದರಿಂದ ಸಿಟ್ಟಿಗೆದಿದ್ದ ಕಾಂಗ್ರೆಸ್‌ ಉಪಸಭಾಪತಿಯವರನ್ನು ಅನಾಮತ್ತಾಗಿ ಅಲ್ಲಿಂದ ಎಬ್ಬಿಸುವ ಪ್ರತಿ ತಂತ್ರವನ್ನು ರೂಪಿಸಿತ್ತು. ಸಭಾಪತಿ ಪೀಠದಲ್ಲಿ ಕುಳಿತ್ತಿದ್ದ ಧರ್ಮೇಗೌಡ ಅವರನ್ನು ಕಾಂಗ್ರೆಸ್‌ ಸದಸ್ಯರಾದ ನಾರಾಯಣಸ್ವಾಮಿ, ನಜೀರ್‌ ಅಹಮದ್‌ ಮತ್ತು ಶ್ರೀನಿವಾಸಮಾನೆ ಅವರು ತೋಳು ಹಿಡಿದು ಬಲವಂತವಾಗಿ ಎಬ್ಬಿಸಿದರು. ಇನ್ನೊಂದೆಡೆ ಬಿಜೆಪಿಯ ಪುಟ್ಟಣ್ಣ, ವೈ.ಎ.ನಾರಾಯಣಸ್ವಾಮಿ ಅವರು ಇದನ್ನು ತಡೆಯಲು ಮುಂದಾಗಿದ್ದರು. ಈ ಜಗ್ಗಾಟದಲ್ಲಿ ಕಾಂಗ್ರೆಸ್‌ನ ನಾರಾಯಣಸ್ವಾಮಿ ಮತ್ತು ನಜೀರ್‌ ಅಹಮದ್‌ ಉಪಸಭಾಪತಿಯವರನ್ನು ಕತ್ತು, ಬೆನ್ನು ಮತ್ತು ತೋಳು ಹಿಡಿದು ಅನಾಮತ್ತಾಗಿ ಕೆಳಗೆ ದೂಡಿದ್ದರು.

ಆಗ ಧರ್ಮೇಗೌಡರು ಕೆಳಗಿದ್ದ ಸದಸ್ಯರ ಮೇಲೆ ಬಿದ್ದರು. ಧರ್ಮೇಗೌಡ ನೆಲಕ್ಕೆ ಅಪ್ಪಳಿಸಿ ಬೀಳುವುದನ್ನು ಜೆಡಿಎಸ್‌ನ ಶ್ರೀಕಂಠೇಗೌಡ ತಡೆದಿದ್ದರು. ಈ ಬೆಳವಣಿಗೆಯಿಂದ ಆಘಾತಕ್ಕೊಳಗಾಗಿದ್ದ ಅವರು ಸದಸ್ಯರ ಆಸನದಲ್ಲಿ ಕೆಲಕಾಲ ವಿರಮಿಸಿದರು.

ಪರಿಷತ್ತಿನಲ್ಲಿ ಸಜ್ಜನಿಕೆ ಮತ್ತು ಮೃದು ಭಾಷಿಯಾಗಿ ಧರ್ಮೇಗೌಡ ಗಮನಸೆಳೆದಿದ್ದರು. ಸದಸ್ಯ ಮತ್ತು ಉಪಸಭಾಪತಿಯಾಗಿ ಧ್ವನಿ ಏರಿಸಿ ಮಾತನಾಡಿದವರಲ್ಲ. ಹೇಳಬೇಕಾದುದನ್ನು ನಗು ನಗುತ್ತಲ್ಲೇ ಹೇಳುವುದು ಅವರ ಶೈಲಿಯಾಗಿತ್ತು.

ಪರಿಷತ್‌ ಸಚಿವಾಲಯಕ್ಕೆ ರಜೆ ಘೋಷಣೆ
ಬೆಂಗಳೂರು:
ಉಪ ಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ವಿಧಾನ ಪರಿಷತ್‌ ಸಚಿವಾಲಯಕ್ಕೆ ಮಂಗಳವಾರ ರಜೆ ಘೋಷಿಸಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಆದೇಶ ಹೊರಡಿಸಿದರು.

ಪ್ರತ್ಯೇಕವಾದ ಶೋಕ ಸಂದೇಶವನ್ನೂ ನೀಡಿದ ಸಭಾಪತಿ, ‘ಧರ್ಮೇಗೌಡ ಅವರ ನಿಧನದ ಸುದ್ದಿ ತಿಳಿದು ದಿಗ್ಭ್ರಮೆಯಾಗಿದೆ. ಸದನವು ಒಬ್ಬ ಸರಳ, ಸಜ್ಜನಿಕೆಯ ಮತ್ತು ಮಿತಭಾಷಿ ವ್ಯಕ್ತಿತ್ವದ ಸದಸ್ಯನನ್ನು ಕಳೆದುಕೊಂಡಿದೆ. ಸಹಕಾರಿ ಕ್ಷೇತ್ರದಲ್ಲಿ ಗ್ರಾಮದಿಂದ ಅಂತರರಾಷ್ಟ್ರೀಯ ಮಟ್ಟದವರೆಗೂ ಅವರು ಸಕ್ರಿಯರಾಗಿದ್ದರು. ಮಂಡಲ ಪಂಚಾಯಿತಿ ಪ್ರಧಾನರ ಹುದ್ದೆಯಿಂದ ಆರಂಭಿಸಿ ವಿಧಾನ ಪರಿಷತ್‌ ಉಪ ಸಭಾಪತಿ ಹುದ್ದೆಯವರೆಗೂ ಏರಿದ್ದರು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT