ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಅಧಿಕೃತ ಸರ್ಕಾರಿ ನಿವಾಸ ಜಲದರ್ಶಿನಿಯಲ್ಲಿ ಹೈಟೆಕ್ ಈಜುಕೊಳ ನಿರ್ಮಿಸುತ್ತಿದ್ದಾರೆ. ಜಿಲ್ಲಾಧಿಕಾರಿ ನಿವಾಸವು ಪಾರಂಪರಿಕ ಕಟ್ಟಡಗಳ ವ್ಯಾಪ್ತಿಗೆ ಸೇರಿದ್ದು, ಕೋವಿಡ್ ಸಂಕಷ್ಟ ಕಾಲದಲ್ಲಿ ಇಂತಹ ಮೋಜು ಮಸ್ತಿ ಏಕೆ ಬೇಕಿತ್ತು ಎಂದು ಜೆಡಿಎಸ್ ಮುಖಂಡ ಕೆ.ವಿ. ಮಲ್ಲೇಶ್ ಕಿಡಿ ಕಾರಿದ್ದಾರೆ.
ಡಿಸಿ ವಿರುದ್ಧ ವಾಗ್ದಾಳಿ ನಡೆಸಿದ ಮಲ್ಲೇಶ್, ಈಜುಕೊಳ ನಿರ್ಮಿಸಲು ಯಾವ ಅನುದಾನ ಬಳಸಿದ್ದೀರಿ ಬಹಿರಂಗಪಡಿಸಿ. ಇದಕ್ಕೆ ಸರ್ಕಾರದ ಅನುದಾನ ಬಳಸಿದ್ದೀರಾ?ಅಥವಾ ಬೇರೆ ಯಾರಾದರೂ ಪ್ರಾಯೋಜಕರ ಸಹಾಯ ಪಡೆದಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಮುಂದುವರಿದು, ಕೋವಿಡ್ ಕಾಲದಲ್ಲಿ ದಿನದ 24 ಗಂಟೆಯೂ ಕಾಲ ಕೆಲಸ ಮಾಡುತ್ತೇನೆ ಎಂದು ಹೇಳುತ್ತೀರಿ. ಹಾಗಾದರೆ, ಇಂತಹ ಮೋಜು ಮಸ್ತಿಗೆ ಸಮಯ ಹೇಗೆ ಸಿಗುತ್ತದೆ. ಜನಪರವಾಗಿ ಚಿಂತಿಸುವ ಜಿಲ್ಲಾಧಿಕಾರಿಯಾದವರು ಇಂತಹ ಕೆಲಸ ಮಾಡುವರೇ? ನಿಮಗೆ ನಿಜಕ್ಕೂ ಜನಪರ ಕಾಳಜಿ ಇಲ್ಲ ಎಂದಿದ್ದಾರೆ.
ಆರ್.ಟಿ.ಐ ಮೂಲಕ ಮಾಹಿತಿ ಕೋರುವೆ. ಈ ಕಾಮಗಾರಿಗೆ ಬಳಸಿದ ಅನುದಾನದ ಕುರಿತು ಮಾಹಿತಿ ಕೊಡಬೇಕು ಎಂದು ತಾಯಂದಿರ ದಿನವಾದ ಇಂದು ಆಗ್ರಹಿಸುತ್ತೇನೆ. ಜನರಿಗೆ ಒಳ್ಳೆಯದು ಮಾಡಲು ಆಗದಿದ್ದರೆ, ಮೈಸೂರಿನಿಂದ ನಿರ್ಗಮಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾರೇ ಸಮಸ್ಯೆ ಹೇಳಿಕೊಂಡರೂನಿಮ್ಮ ಬಳಿ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ನೀವು ಜನರ ಕೈಗೂ ಸಿಗುತ್ತಿಲ್ಲ. ಪಾರಂಪರಿಕ ಕಟ್ಟಡಗಳ ಸಮಿತಿಗೆ ಜಿಲ್ಲಾಧಿಕಾರಿಯೇ ಅಧ್ಯಕ್ಷರು. ಪಾರಂಪರಿಕ ಕಟ್ಟಡ ಪಕ್ಕ ನಿರ್ಮಾಣ ಕಾರ್ಯ ಮಾಡಬೇಕಾದರೆ ಜಿಲ್ಲಾಧಿಕಾರಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅದರೆ, ಈಜುಕೊಳದ ವಿಚಾರದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ಗುಡುಗಿದರು.
ಈಜುಕೊಳದ ಚಿತ್ರಗಳನ್ನೂ ಪ್ರದರ್ಶಿಸಿದ ಮಲ್ಲೇಶ್, ಇದರಿಂದ ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗುತ್ತದೆ ಎಂದೂ ಗಂಭೀರವಾಗಿ ಆರೋಪಿಸಿದರು.