ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ ತಪ್ಪು ನಿರ್ಧಾರಗಳಿಗೆ ಅಡಿಪಾಯ ಹಾಕಿದವರು ನೆಹರೂ: ಬಿಜೆಪಿ ಟೀಕೆ

Last Updated 4 ಫೆಬ್ರುವರಿ 2023, 12:44 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ಸಿಗರು ತಪ್ಪು ನಿರ್ಧಾರಗಳಿಗೆ ಹೆಸರುವಾಸಿ, ಅದಕ್ಕೆ ಅಡಿಪಾಯ ಹಾಕಿಕೊಟ್ಟವರು ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಎಂದು ಬಿಜೆಪಿ ಟೀಕಿಸಿದೆ.

ಜಾಗತಿಕ ಮಟ್ಟದಲ್ಲಿ ದೇಶದ ಪ್ರಧಾನ ಮಂತ್ರಿಗಳ ಜನಪ್ರಿಯತೆಯನ್ನು ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ನರೇಂದ್ರ ಮೋದಿ ಅವರು ಜಾಗತಿಕ ನಾಯಕರ ಪೈಕಿ ಶೇಕಡ 78 ರೇಟಿಂಗ್ ಪಡೆಯುವ ಮೂಲಕ ಅಗ್ರ ನಾಯಕರಾಗಿದ್ದಾರೆ. ನಿರಂತರ 21 ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದು, ಇಂದಿಗೂ ಜನಪರ ಮತ್ತು ಜನಪ್ರಿಯ ಆಗಿರುವ ನಮ್ಮ ಪ್ರಧಾನಿಯವರನ್ನು ವಿಶ್ವನಾಯಕ ಎಂದು ಜಗವೇ ಒಪ್ಪಿಕೊಂಡಿದೆ’ ಎಂದು ಕೊಂಡಾಡಿದೆ.

‘ಭಾರತವನ್ನು ದೀರ್ಘ ಕಾಲ ಆಳಿದ ನೆಹರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಲು ತವಕಿಸಿದರು. ಪಾಕಿಸ್ತಾನದ ಜತೆಗಿನ ಸ್ನೇಹ ಅವರನ್ನು ಶಾಂತಿ‌ದೂತನನ್ನಾಗಿ ಮಾಡಲಿಲ್ಲ. ಚೀನಾ‌ ಮರ್ಯಾದೆ ಉಳಿಸಲಿಲ್ಲ. ಕಾಂಗ್ರೆಸ್‌ ನಾಯಕರು ಇಂದಿಗೂ ತಪ್ಪು ನಿರ್ಧಾರಗಳಿಗೆ ಹೆಸರುವಾಸಿ, ಅದಕ್ಕೆ ಅಡಿಪಾಯ ಹಾಕಿಕೊಟ್ಟವರು ಶ್ರೀಯುತ‌ ನೆಹರೂ’ ಎಂದು ಬಿಜೆಪಿ ಕಿಡಿಕಾರಿದೆ.

‘ದೇಶದೊಳಗೆ ಖ್ಯಾತಿಯನ್ನು ಇಂದಿರಾ ಗಾಂಧಿಯವರೂ ಪಡೆದಿದ್ದರು. ಆದರೆ, ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಅವರ ನಡೆ ಇಂದಿಗೂ ಭಾರತದ ರಾಜಕೀಯ ಇತಿಹಾಸದಲ್ಲಿ ಕಪ್ಪುಚುಕ್ಕೆ’ ಎಂದು ಬಿಜೆಪಿ ಗುಡುಗಿದೆ.

‘ನಿರಂತರ 3,209 ದಿನಗಳ ಕಾಲ ಈ ರೀತಿ ಕಾರ್ಯೋನ್ಮುಖರಾಗಿರುವ ನರೇಂದ್ರ ಮೋದಿ ಅವರಂಥ ಇನ್ನೊಬ್ಬ ನಾಯಕನನ್ನೇ ಈ ದೇಶ ಕಂಡಿಲ್ಲ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್‌’ ಎಂಬ ಸಂದೇಶವನ್ನು ಭಾರತಕ್ಕೆ ಮಾತ್ರವಲ್ಲ, ಜಗತ್ತಿಗೆ ಸಾರಿದ ದಾರ್ಶನಿಕ ನಮ್ಮ ಪ್ರಧಾನಿ ಎಂಬುದು ಪ್ರತಿಯೊಬ್ಬ ಭಾರತೀಯನ ಪಾಲಿನ ಹೆಮ್ಮೆ. ಅಭಿನಂದನೆಗಳು ಮೋದಿ ಜೀ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT