ಹುಬ್ಬಳ್ಳಿ/ದಾವಣಗೆರೆ: ಧಾರವಾಡ, ದಾವಣಗೆರೆ, ಗದಗ ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಳೆ ಸುರಿದಿದೆ. ಧಾರವಾಡ ಜಿಲ್ಲೆಯ ಮುಂಡಗೋಡದಲ್ಲಿ ಬಿರುಸಿನ ಗಾಳಿ ಮಳೆಗೆ ತಾಲ್ಲೂಕಿನ ಹುಲಿಹೊಂಡ ಗ್ರಾಮದಲ್ಲಿ ಪಪ್ಪಾಯಿ ತೋಟದಲ್ಲಿ, ನೂರಾರು ಸಂಖ್ಯೆಯ ಫಲಭರಿತ ಗಿಡಗಳು ಮುರಿದು ಬಿದ್ದಿವೆ. ಸುಳ್ಳಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ಚಾವಣಿ ಹಾರಿ ಹೋಗಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರ, ಹರಪನಹಳ್ಳಿ, ಅರಸೀಕೆರೆ ಭಾಗದಲ್ಲಿ ಸಾಧಾರಣ ಮಳೆ ಸುರಿಯಿತು. ಹೂವಿನಹಡಗಲಿ ತಾಲ್ಲೂಕು ಸೋಗಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಮಳೆಗೆ ಒಂದೂವರೆ ಎಕರೆ ಬಾಳೆತೋಟ, ಬಾವಿಹಳ್ಳಿ ಗ್ರಾಮದಲ್ಲಿ ಎರಡು ಎಕರೆ ನುಗ್ಗೆ ತೋಟಕ್ಕೆ ಹಾನಿಯಾಯಿತು. ಸೋಗಿ ಗ್ರಾಮದ ಶಾಲೆ ಬಳಿ ಎರಡು ವಿದ್ಯುತ್ ಕಂಬಗಳು, ಗಿಡಮರಗಳು ಉರುಳಿ ಬಿದ್ದಿವೆ.
ವಿಜಯಪುರ ನಗರದಲ್ಲಿ ಜೋರು ಮಳೆಯಾದರೆ, ಗದಗ ಜಿಲ್ಲೆಯ ನರಗುಂದದಲ್ಲಿ ಸಾಧಾರಣ ಮಳೆಯಾಯಿತು. ಬಾಗಲಕೋಟೆ ಜಿಲ್ಲೆಯ ರಬಕವಿ–ಬನಹಟ್ಟಿ, ಬಾಗಲಕೋಟೆ, ಹುನಗುಂದ, ಬೀಳಗಿ, ಮಹಾಲಿಂಗಪುರ, ತೇರದಾಳ, ಗುಡೂರು ಸೇರಿದಂತೆ ಹಲವೆಡೆ ಮಳೆ ಸುರಿದಿದೆ. ಹಾವೇರಿ ಜಿಲ್ಲೆ ಹಂಸಬಾವಿ, ಬ್ಯಾಡಗಿ, ರಟ್ಟೀಹಳ್ಳಿ ಸೇರಿ ಸುತ್ತಮುತ್ತ ಗುಡುಗು ಸಹಿತ ಉತ್ತಮ ಮಳೆಯಾಯಿತು.
ಸಾಧಾರಣ ಮಳೆ: ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಸಂಜೆ ಬಿರುಗಾಳಿ ಸಹಿತ ಸಾಧಾರಣ ಮಳೆ ಸುರಿಯಿತು.
ನಗರದ ಹೊರವಲಯದ ಆವರಗೆರೆ, ಬಾಡಾ ಕ್ರಾಸ್ ಭಾಗದಲ್ಲೂ ಅರ್ಧ ಗಂಟೆಗೂ ಹೆಚ್ಚು ಕಾಲ ವರುಣ ಆರ್ಭಟಿಸಿದ. ಮಳೆಯಿಂದಾಗಿ ಕೆಲಕಾಲ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಯಿತು. ಬೈಕ್ ಸವಾರರು ರಸ್ತೆ ಬದಿ ಬೈಕ್ ನಿಲ್ಲಿಸಿ, ಹೋಟೆಲ್, ಮಳಿಗೆಗಳ ಆಶ್ರಯ ಪಡೆದರು. ರಸ್ತೆಗಳಲ್ಲಿ ನೀರು ಹರಿಯಿತು.
ಜಿಲ್ಲೆಯ ಚನ್ನಗಿರಿ, ಸಂತೇಬೆನ್ನೂರು, ಮಲೇಬೆನ್ನೂರು, ಹೊನ್ನಾಳಿ ಹಾಗೂ ಮಾಯಕೊಂಡ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಯ ಸಿಂಚನವಾಯಿತು. ಹರಿಹರ, ನ್ಯಾಮತಿ ತಾಲ್ಲೂಕಿನಲ್ಲಿ ಮೋಡ ಕವಿದ ವಾತಾವರಣ ಇತ್ತು.
ಚಿತ್ರದುರ್ಗ ವರದಿ: ನಗರದಲ್ಲಿ ಶುಕ್ರವಾರ ಸಂಜೆ ಗುಡುಗು, ಮಿಂಚು ಸಹಿತ ತುಂತುರು ಮಳೆ ಸುರಿಯಿತು. ಬೇಸಿಗೆ ಬಿಸಿಲಿನಿಂದ ಬಸವಳಿದಿದ್ದ ಭೂಮಿ ತಂಪಾಯಿತು. ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರು ಸುತ್ತಮುತ್ತಲ ಗ್ರಾಮಗಳಲ್ಲಿ ಬಿರುಗಾಳಿ ಸಹಿತ ತುಂತುರು ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.