ಒಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮನ್ನು ಕಾನೂನಿನ ವ್ಯಾಪ್ತಿಗೆ ತರಲು ಸಾಂವಿಧಾನಿಕ ತಿದ್ದುಪಡಿ ತಂದಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ನೇತೃತ್ವದಲ್ಲಿ ಇಡೀ ವಿರೋಧ ಪಕ್ಷಗಳು ಸರ್ಕಾರಗಳನ್ನು ಜೈಲಿನಿಂದ ನಡೆಸಲು ಮತ್ತು ಅಧಿಕಾರಕ್ಕೆ ಅಂಟಿಕೊಂಡಿರಲು ಮಸೂದೆಗಳನ್ನು ವಿರೋಧಿಸಿವೆ.– ಅಮಿತ್ ಶಾ, ಕೇಂದ್ರ ಗೃಹ ಸಚಿವ
ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಅವರಂತಹ ಮಿತ್ರಪಕ್ಷಗಳ ನಾಯಕರಿಗೆ ಬೆದರಿಕೆ ಒಡ್ಡಲು ಗೃಹ ಸಚಿವರು ಈ ಅಪಾಯಕಾರಿ ಮಸೂದೆ ತಂದಿದ್ದಾರೆ. ಈ ಮಸೂದೆಯು ಸಾಂವಿಧಾನಿಕ ಒಕ್ಕೂಟ ತತ್ವಗಳ ಹೃದಯಭಾಗಕ್ಕೆ ದಾಳಿ ಮಾಡುತ್ತದೆ. ವಿರೋಧ ಪಕ್ಷಗಳ ಸರ್ಕಾರಗಳನ್ನು ಹಣಿಯುವ ದುರುದ್ದೇಶವೂ ಈ ಮಸೂದೆ ಹಿಂದಿದೆ.– ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ಸಂಸದ
ಈ ಮಸೂದೆಗಳು ಸಂವಿಧಾನದ ಮೂಲ ಸ್ವರೂಪವನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ಮಸೂದೆಗಳು ಕ್ರಿಮಿನಲ್ ನ್ಯಾಯದ ನ್ಯಾಯಶಾಸ್ತ್ರಕ್ಕೆ ವಿರುದ್ಧವಾಗಿವೆ ಮತ್ತು ಸಂಸದೀಯ ಪ್ರಜಾಪ್ರಭುತ್ವವನ್ನು ವಿರೂಪಗೊಳಿಸುತ್ತವೆ. ಜತೆಗೆ, ರಾಜಕೀಯ ದುರುಪಯೋಗಕ್ಕೆ ಹೆಬ್ಬಾಗಿಲು ತೆರೆಯುತ್ತವೆ.– ಮನೀಷ್ ತಿವಾರಿ, ಕಾಂಗ್ರೆಸ್ ಸಂಸದ
ಅನಗತ್ಯ ಆತುರ ತೋರಿ ಈ ಮಸೂದೆಗಳನ್ನು ಪರಿಚಯಿಸಲಾಗುತ್ತಿದೆ. ಸದನದ ಕಾರ್ಯವಿಧಾನಗಳ ಪ್ರಕಾರ ಈ ಮಸೂದೆಗಳನ್ನು ಮಂಡಿಸಿಲ್ಲ. ಮಸೂದೆಗಳ ಪ್ರತಿಗಳನ್ನು ಸದನದ ಸದಸ್ಯರಿಗೆ ಏಳು ದಿನ ಮುಂಚಿತವಾಗಿ ನೀಡಬೇಕಿತ್ತು.– ಎನ್.ಕೆ.ಪ್ರೇಮಚಂದ್ರನ್, ಆರ್ಎಸ್ಪಿ ಸಂಸದ
ಈ ಸರ್ಕಾರ ಪೊಲೀಸ್ ರಾಜ್ಯ ರಚಿಸಲು ಮುಂದಾಗಿದೆ. ಇದು ಚುನಾಯಿತ ಸರ್ಕಾರಕ್ಕೆ ಮರಣದಂಡನೆಯಾಗುತ್ತದೆ. ಕ್ಷುಲ್ಲಕ ಆರೋಪಗಳು ಹಾಗೂ ಅನುಮಾನದ ಆಧಾರದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ನ್ಯಾಯಾಧೀಶರಂತೆ ಕಾರ್ಯನಿರ್ವಹಿಸಲು ಈ ಮಸೂದೆಗಳು ಅನುವು ಮಾಡಿಕೊಡುತ್ತವೆ.– ಅಸಾದುದ್ದೀನ್ ಓವೈಸಿ, ಎಐಎಂಐಎಂ ಸಂಸದ
ನೀವು 30 ದಿನ ಜೈಲಿನಲ್ಲಿ ಇದ್ದರೆ ಸಚಿವರಾಗಿ ಮುಂದುವರಿಯಬಹುದೇ? ಇದು ಸಾಮಾನ್ಯ ಜ್ಞಾನ. ಇದರಲ್ಲಿ ನನಗೆ ಯಾವುದೇ ತಪ್ಪು ಕಾಣುತ್ತಿಲ್ಲ. ಮಸೂದೆಯನ್ನು ಪರಾಮರ್ಶೆಗೆ ಜೆಪಿಸಿಗೆ ಒಪ್ಪಿಸಿರುವುದು ಉತ್ತಮ ನಡೆ.– ಶಶಿ ತರೂರ್, ಕಾಂಗ್ರೆಸ್ ಸಂಸದ (ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.