ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಜಾಗೃತಿ ಸಮಾವೇಶ: ಲಿಂಗಾಯತ ಉಪ ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸಲು ಆಗ್ರಹ

Published 10 ಸೆಪ್ಟೆಂಬರ್ 2023, 23:30 IST
Last Updated 10 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಬಳ್ಳಾರಿ: ‘ವೀರಶೈವ–ಲಿಂಗಾಯತ ಸಮಾಜದ ಎಲ್ಲ ಉಪ ಜಾತಿಗಳನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುವಂತೆ ಒತ್ತಡ ಹಾಕಲು ಒಗ್ಗಟ್ಟಿನಿಂದ ಹೋರಾಡಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ್‌ ಶೆಟ್ಟರ್‌ ಹಾಗೂ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಸಲಹೆ ನೀಡಿದರು.

ಹಾನಗಲ್‌ ಕುಮಾರಸ್ವಾಮಿಗಳ 156ನೇ ಜಯಂತ್ಯುತ್ಸವ ಹಾಗೂ ವೀರಶೈವ–ಲಿಂಗಾಯತ ಮಹಾಸಭಾದ ಆಶ್ರಯದಲ್ಲಿ ಏರ್ಪಡಿಸಿದ್ದ ಜನ ಜಾಗೃತಿ ಸಮಾವೇಶ ಭಾನುವಾರ ಉದ್ಘಾಟಿಸಿ ಮಾತನಾಡಿದ ಜಗದೀಶ್‌ ಶೆಟ್ಟರ್, ‘ಸಮಾಜದ ಎಲ್ಲ ಉಪ ಜಾತಿಗಳನ್ನು ಸಂಘಟಿಸಿ ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಬೇಡಿಕೆ ಈಡೇರಲಿದೆ’ ಎಂದು ಅಭಿಪ್ರಾಯಪಟ್ಟರು. 

ಸಚಿವ ಈಶ್ವರ ಖಂಡ್ರೆ, ‘ನಮ್ಮ ಸಮಾಜ ಕವಲು ದಾರಿಯಲ್ಲಿದೆ. ಗುರು– ವಿರಕ್ತ ಪರಂಪರೆಯವರನ್ನು ಒಂದೇ ವೇದಿಕೆಯಲ್ಲಿ ತರಲು ಕೂಡಲ ಸಂಗಮದಲ್ಲಿ ಸಮಾವೇಶ ಸಂಘಟಿಸಲಾಗಿತ್ತು. ಆದರೂ ಈ ಸಮಾಜ ಒಗ್ಗೂಡಿಲ್ಲ. ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲ ಎರಡೂ ಸಮಾನಾರ್ಥ ಪದಗಳು. ಎರಡರ ನಡುವೆ ಯಾವುದೇ ಭೇದಭಾವವಿಲ್ಲ’ ಎಂದು ಹೇಳಿದರು. 

ಉಜ್ಜಯಿನಿಯ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಕಲ್ಯಾಣ ಸ್ವಾಮಿ ಮಠದ ಕ‌ಲ್ಯಾಣ ಸ್ವಾಮಿ, ಸಿರುಗುಪ್ಪ ಬಸವ ಭೂಷಣ ಸ್ವಾಮಿ ಸಾನಿಧ್ಯ ವಹಿಸಿದ್ದರು. ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎನ್‌. ತಿಪ್ಪಣ್ಣ ಅವರನ್ನು ಸಮಾರಂಭದಲ್ಲಿ ಅಭಿನಂದಿಸಲಾಯಿತು. 

ಇದೇ ಸಮಾರಂಭದಲ್ಲಿ ಸಂಗನಬಸವ ಸ್ವಾಮೀಜಿಗೆ ಮರಣೋತ್ತರವಾಗಿ ‘ಕುಮಾರಶ್ರೀ’ ಪ್ರಶಸ್ತಿ, ಸಮಾಜದ ಮುಖಂಡರಾದ ಭೀಮಣ್ಣ ಖಂಡ್ರೆ ಅವರಿಗೆ ‘ಶರಣ ಸಕ್ಕರೆ ಕರಡೀಶ’ ಪ್ರಶಸ್ತಿ, ಶಾಮನೂರು ಶಿವಶಂಕರಪ್ಪ ಅವರಿಗೆ ‘ಮಹಾದೇವ ತಾತ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಬಸವಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ  ಬಿ.ಎಸ್‌. ಯಡಿಯೂರಪ್ಪ ಗೈರು ಹಾಜರಾಗಿದ್ದರು.

ಹರಪನಹಳ್ಳಿ ಶಾಸಕಿ ಲತಾ, ವೀರಶೈವ ಲಿಂಗಾಯತ ಸಮಾಜದ ಮುಖಂಡ ರೇಣುಕಾ ಪ್ರಸನ್ನ, ಅಲ್ಲಂ ವೀರಭದ್ರಪ್ಪ, ರಾಮನಗೌಡ, ಗುರುಸಿದ್ದಸ್ವಾಮಿ, ಚಾನಾಳ್‌ ಶೇಖರ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾವೇಶದ ಅಂಗವಾಗಿ ನಡೆದ ಮೆರವಣಿಗೆಯನ್ನು ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಉದ್ಘಾಟಿಸಿದರು.

ಸಂಘರ್ಷ ಬೇಡ; ಸಮನ್ವಯತೆ ಬೇಕು...

‘ಜಾತಿ ಉಪ ಜಾತಿಗಳ ನಡುವೆ ಸಂಘರ್ಷ ನಡೆಯುತ್ತಿದೆ. ನಮ್ಮ ಲಾಭಕ್ಕಾಗಿ ಸಮಾಜ ಒಡೆಯುತ್ತಿದ್ದೇವೆ. ಸಮಾಜದ ಏಕತೆಗಾಗಿ ಸಮನ್ವಯತೆ ಸಾಧಿಸಬೇಕಾಗಿದೆ. ನೀತಿ–ತತ್ವಗಳ ಆಧಾರದ ಮೇಲೆ ಎಲ್ಲ ಉಪ ಜಾತಿಗಳು ಒಗ್ಗೂಡಬೇಕಿದೆ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

‘ನಮ್ಮ ಚಿಂತನೆಗಳ ವಿರುದ್ಧ ಒಂದು ವರ್ಗ ಕೆಲಸ ಮಾಡುತ್ತಿದೆ. ನಮ್ಮನ್ನು ಅಡಕತ್ತರಿಯಲ್ಲಿ ಸಿಕ್ಕಿಸುವ ಕುತಂತ್ರಗಳಿಗೆ ಸಮರ್ಥವಾಗಿ ಉತ್ತರಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಚರಿತ್ರೆಗಿಂತ ಚಾರಿತ್ರ್ಯ ಮುಖ್ಯ. ಮಠ– ಮಾನ್ಯಗಳಿವೆ. ಆಚಾರ್ಯರಿದ್ದಾರೆ. ಆದರೆ ಆಚರಣೆಗಳಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಶಿಕ್ಷಣ ಉದ್ಯೋಗ ಮತ್ತು ಆಧ್ಯಾತ್ಮ ಕ್ಷೇತ್ರಗಳಲ್ಲಿ ಮಹಾನ್‌ ಸಾಧನೆ ಜತೆಗೆ ವೈಚಾರಿಕಾ ಕ್ರಾಂತಿಯ ಮಠಗಳನ್ನು ಸ್ಥಾಪಿಸಿದ ಬಳಿಕವೂ ವೀರಶೈವ ಲಿಂಗಾಯತರಲ್ಲಿ ಸಂಘಟಿತ ಸಮಾಜ ನಿರ್ಮಾಣ ಸಾಧ್ಯವಾಗಿಲ್ಲ’ ಎಂದು ವಿಷಾದಿಸಿದರು.

‘ವೀರಶೈವ– ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಈಗಲೂ ಚರ್ಚೆಗಳು ನಡೆಯುತ್ತಿವೆ. ಈ ವಿಷಯದಲ್ಲಿ ಸಮಾಜದಲ್ಲಿ ಒಮ್ಮತ ಮೂಡಿಸುವ ಅಗತ್ಯವಿದೆ’
–ಜಗದೀಶ ಶೆಟ್ಟರ್ ವಿಧಾನ ಪರಿಷತ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT