ಬೆಂಗಳೂರು: ಪಿಎಸ್ಐ ಹಗರಣದ ಸಂತ್ರಸ್ತರನ್ನು ಎದುರುಗೊಂಡು ಅವರ ನೋವನ್ನು ಆಲಿಸಲು ಧೈರ್ಯವಿಲ್ಲದೆ ಪೊಲೀಸರನ್ನು ಬಿಟ್ಟು ಹೊಡೆಸುತ್ತೀರಾ? ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಪಿಎಸ್ಐ ಅಕ್ರಮದಿಂದ ಸಂತ್ರಸ್ತರಾದ ಪ್ರಾಮಾಣಿಕ ಅಭ್ಯರ್ಥಿಗಳ ಮೇಲೆ ತುಮಕೂರು ಡಿವೈಎಸ್ಪಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಯುವಕನೊಬ್ಬನನ್ನು ತಳಿಸುತ್ತಿರುವ ವಿಡಿಯೊವನ್ನು ಹಂಚಿಕೊಂಡಿದೆ. ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
'ಅಭ್ಯರ್ಥಿಗಳನ್ನು ಭೇಟಿಯಾಗಲು, ಅವರ ನೋವು ಆಲಿಸಲು ಹಿಂದೇಟು ಹಾಕುವುದೇಕೆ? ಅವರ ಸಮಸ್ಯೆಗೆ ಇದುವರೆಗೂ ಪರಿಹಾರ ಸೂಚಿಸದಿರುವುದೇಕೆ? ಯೋಗ್ಯತೆ ಇಲ್ಲದ ಮೇಲೆ ಕುರ್ಚಿಯಿಂದ ಇಳಿಯಿರಿ' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
'ಅಕ್ರಮ ನಡೆಸಿದ ಸರ್ಕಾರ ಅಪರಾಧಿ ಸ್ಥಾನದಲ್ಲಿದೆ. ಆದರೆ ಶಿಕ್ಷೆ ಮಾತ್ರ ಅಭ್ಯರ್ಥಿಗಳಿಗೆ ನೀಡಲಾಗುತ್ತಿದೆ. ಅವರು ಉದ್ಯೋಗ ಕೇಳುತ್ತಿದ್ದಾರೆಯೇ ಹೊರತು ನಿಮ್ಮ ಕುರ್ಚಿಯನ್ನಲ್ಲ' ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟೀಕಿಸಿದೆ.