ಗೋಕಾಕ (ಬೆಳಗಾವಿ ಜಿಲ್ಲೆ): ‘17 ಜನ ಶಾಸಕರನ್ನು ಕರೆದುಕೊಂಡು ಬಂದು, ಭ್ರಷ್ಟ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಕೆಡವಿದ ರಮೇಶ ಜಾರಕಿಹೊಳಿ ನಮ್ಮ ನಡುವಿನ ಸೂಪರ್ ಹೀರೊ’ ಎಂದು ಬಿಜೆಪಿ ಶಾಸಕ, ಗೋಕಾಕ ಕ್ಷೇತ್ರ ಉಪಚುನಾವಣೆ ಉಸ್ತುವಾರಿ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು.
ಇಲ್ಲಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ‘ಜಾರಕಿಹೊಳಿ ಕುಟುಂಬ ಬೆಂಬಲಿಸುವ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಿಲನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಜಾರಕಿಹೊಳಿ ಸಹೋದರರು ಬಹು ಮುಖ್ಯ ಪಾತ್ರ ವಹಿಸಿದ್ದಾರೆ. ಬಿಜೆಪಿ ಸರ್ಕಾರ ರಚನೆಗೆ 2008ರಲ್ಲಿ ಬಾಲಚಂದ್ರ ಜಾರಕಿಹೊಳಿ ಕಾರಣವಾಗಿದ್ದರು. 2019ರಲ್ಲಿ ರಮೇಶ ಬಹು ದೊಡ್ಡ ಪಾತ್ರ ವಹಿಸಿದ್ದಾರೆ. ಇಡೀ ರಾಜ್ಯದ ಜನರು ಇಲ್ಲಿನ ಚುನಾವಣೆಯನ್ನು ಕುತೂಹಲದಿಂದ ನೋಡುತ್ತಿದ್ದಾರೆ. ಎಲ್ಲರ ಕಣ್ಣು ಗೋಕಾಕ ಮೇಲಿದೆ’ ಎಂದರು.
‘ರಮೇಶ ಆಯ್ಕೆಯಾದರೆ ಉಪಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ’ ಎಂದು ಭವಿಷ್ಯ ನುಡಿದರು.