‘ಕನ್ನಡ ಸಿನಿಮಾದ ಇತಿಹಾಸವನ್ನು ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಸೈದ್ಧಾಂತಿಕ ನೆಲೆಯಲ್ಲಿ ವ್ಯಾಖ್ಯಾನ ಮಾಡುವ ಕೆಲಸ ರಾಷ್ಟ್ರೀಯ ಮಟ್ಟದಲ್ಲಿ ಆಗಬೇಕು. ಕೋಲ್ಕತ್ತದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ತಮಿಳಿನವರೊಬ್ಬರು ತಮ್ಮ ಚಿತ್ರರಂಗದ ಪ್ರತಿ ಸಂಸ್ಕೃತಿ ಸೃಷ್ಟಿಯ ಮರುಕಥನಗಳನ್ನು ಎಂಜಿಆರ್, ಶಿವಾಜಿ ಗಣೇಶನ್, ಕಮಲ ಹಾಸನ್ ಹಾಗೂ ರಜನೀಕಾಂತ್ ಅವರ ಉದಾಹರಣೆಗಳಿಂದ ಚಪ್ಪಾಳೆ ಗಿಟ್ಟಿಸುವಂತೆ ಕಟ್ಟಿಕೊಟ್ಟರು. ಕನ್ನಡದ ಒಳ್ಳೆಯ ಸಿನಿಮಾಗಳನ್ನು ಕೂಡ ನಾವು ಸರಿಯಾಗಿ ಬಿಂಬಿಸುತ್ತಿಲ್ಲ. ‘ಕಾಂತಾರ’ ತನ್ನ ಶಕ್ತಿಯಿಂದ ಬಿಂಬಿತವಾಗಿದೆ. ಕಳೆದ ಐದು ವರ್ಷಗಳಲ್ಲಿ ಕನ್ನಡದ ಕೆಲವು ಸಿನಿಮಾಗಳು ಜಗತ್ತಿನಾದ್ಯಂತ ಮಿಂಚಿವೆ. ‘ಬಳೆ ಕೆಂಪ’, ‘ಪಿಂಕಿ ಎಲ್ಲಿ’, ‘ನಾನು ಕುಸುಮ’, ‘ಪೆದ್ರೊ’ ಹೀಗೆ ಪಟ್ಟಿ ಬೆಳೆಯುತ್ತದೆ. ನಮ್ಮ ಅಸ್ಮಿತೆ, ಕನ್ನಡ ಸಿನಿಮಾದ ಹೆಗ್ಗಳಿಕೆಯನ್ನು ತೋರಿಸುವ ಕೆಲಸ ಮಾಡಬೇಕು’ ಎಂದರು.