ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿಯಲ್ಲಿ ಮೆರೆದ ರಾಜ್ಯದ ಕಳಕಳಿ |ಆಯೋಗದ ಶಿಫಾರಸಿಗಿಂತ ಹೆಚ್ಚು ಹಣ: ನಿರ್ಮಲಾ

Published 7 ಫೆಬ್ರುವರಿ 2024, 18:52 IST
Last Updated 7 ಫೆಬ್ರುವರಿ 2024, 18:52 IST
ಅಕ್ಷರ ಗಾತ್ರ

ನವದೆಹಲಿ: ‘13 ಬಾರಿ ಬಜೆಟ್‌ ಮಂಡಿಸಿರುವ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರ ಆರೋಪ ಆಘಾತಕಾರಿ. ಅವರಿಗೆ ಹಣಕಾಸು ಆಯೋಗದ ಶಿಫಾರಸುಗಳ ಕುರಿತು ಅರಿವೇ ಇದ್ದಂತಿಲ್ಲ. ರಾಜ್ಯದ ಜನರ ಮನಸ್ಸಿನಲ್ಲಿ ವಿಷಕಾರಿ ಅಂಶಗಳನ್ನು ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ಇದರಲ್ಲಿ ಅವರು ಯಶಸ್ಸು ಸಾಧಿಸುವುದಿಲ್ಲ’ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ನಿರ್ಮಲಾ ಅವರು ಹೇಳಿದ್ದೇನು?

  • l 13ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ತೆರಿಗೆ ಪಾಲಿನ ರೂಪದಲ್ಲಿ ರಾಜ್ಯಕ್ಕೆ ₹61,691 ಕೋಟಿ ನೀಡಲಾಗಿತ್ತು. 14ನೇ ಹಣಕಾಸು ಆಯೋಗದ ಶಿಫಾರಸಿನ ಅನ್ವಯ ₹1,15,309 ಕೋಟಿ ಕೊಡಲಾಗಿತ್ತು. 15ನೇ ಹಣಕಾಸು ಆಯೋಗದ ಶಿಫಾರಸಿನ ಮೇರೆಗೆ ನಾಲ್ಕು ವರ್ಷಗಳಲ್ಲೇ ₹1,29,854 ಕೋಟಿ ಒದಗಿಸಲಾಗಿದೆ. ಈ ವರ್ಷದ ಮಾರ್ಚ್‌ ಅಂತ್ಯದ ವೇಳೆಗೆ ₹1.79 ಲಕ್ಷ ಕೋಟಿಗೆ ಏರಲಿದೆ

  • l ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ತೆರಿಗೆ ಪಾಲಿನ ರೂಪದಲ್ಲಿ ₹81,795 ಕೋಟಿ ಕೊಡಲಾಗಿತ್ತು. ಎನ್‌ಡಿಎ ಅವಧಿಯಲ್ಲಿ ₹2,85,452 ಕೋಟಿ ನೀಡಲಾಗಿದೆ. ಅನುದಾನ ಪ್ರಮಾಣ ಶೇ 250ರಷ್ಟು ಹೆಚ್ಚಳವಾಗಿದೆ. ಆದರೆ, ಶೂನ್ಯ ಅನುದಾನ ಒದಗಿಸಲಾಗಿದೆ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ

  • l 2004ರಿಂದ 2014ರ ಅವಧಿಯಲ್ಲಿ ರಾಜ್ಯಕ್ಕೆ ಅನುದಾನ ಹಾಗೂ ಸಹಾಯಧನದ ರೂಪದಲ್ಲಿ ₹60,779 ಕೋಟಿಯಷ್ಟೇ ಕೊಡಲಾಗಿತ್ತು. ಕಳೆದ 10 ವರ್ಷಗಳಲ್ಲಿ ₹2,08,832 ಕೋಟಿ ನೀಡಲಾಗಿದೆ ಮಾರ್ಚ್‌ ಅಂತ್ಯಕ್ಕೆ ₹2,26,837 ಕೋಟಿ ಆಗಲಿದೆ. ಜತೆಗೆ, ಈ ವರ್ಷ ಹೆಚ್ಚುವರಿ ಅನುದಾನ ರೂಪದಲ್ಲಿ ₹18,005 ಕೋಟಿ ಕೊಡಲಾಗುತ್ತಿದೆ.

  • l ತೆರಿಗೆದಾರರ ಹಣವನ್ನು ಬಳಸಿಕೊಂಡು ತೆರಿಗೆದಾರರಿಗೇ ಸುಳ್ಳು ಹೇಳುತ್ತಿದೆ ಕಾಂಗ್ರೆಸ್. ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತೂ ನಾಚಿಕೆ ಇಲ್ಲ. ಪತ್ರಿಕೆಗಳ ಮುಖಪುಟದಲ್ಲಿ ಸುಳ್ಳು ಆರೋಪಗಳ ಜಾಹೀರಾತು ನೀಡಿ ತೆರಿಗೆದಾರರ ಹಣ ಪೋಲು ಮಾಡುತ್ತಿದೆ

  • l ಎಲ್ಲ ರಾಜ್ಯಗಳಿಗೆ 2017ರಿಂದ 2022ರ ಅವಧಿಯ ವರೆಗೆ ಮಾತ್ರ ಜಿಎಸ್‌ಟಿ ಪರಿಹಾರ ನೀಡಲಾಗಿದೆ. ಆದರೆ, ಕರ್ನಾಟಕ ಸರ್ಕಾರವು 2023 ಹಾಗೂ 2024ರ ಜಿಎಸ್‌ಟಿ ಪರಿಹಾರ ನೀಡಿಲ್ಲ ಎಂದು ಆರೋಪ ಮಾಡುತ್ತಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ರಾಜ್ಯಕ್ಕೆ ನಯಾಪೈಸೆ ಜಿಎಸ್‌ಟಿ ಪರಿಹಾರ ಬಾಕಿ ಇರಿಸಿಕೊಂಡಿಲ್ಲ

  • l ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ನೀಡಿ 2023ರ ಬಜೆಟ್‌ನಲ್ಲಿ ₹5,300 ಕೋಟಿ ಹಂಚಿಕೆ ಮಾಡಲಾಗಿದೆ. ಆದರೆ, ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ತನ್ನ ಬಜೆಟ್‌ನಲ್ಲಿ ಈ ಯೋಜನೆಗೆ ಯಾವುದೇ ಹಣ ಮೀಸಲಿಟ್ಟಿಲ್ಲ

  • l ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ಮಾಡುವ ಸಂಬಂಧ ತಜ್ಞರ ಸಮಿತಿ ಕಳುಹಿಸಿ ವರದಿ ಪಡೆಯಲಾಗಿದೆ. ಇದನ್ನು ಸಚಿವರ ಉನ್ನತ ಮಟ್ಟದ ಸಮಿತಿ ಪರಿಶೀಲನೆ ನಡೆಸುತ್ತಿದೆ. ಬರ ಪರಿಹಾರ ಹಾಗೂ ಪ್ರಕೃತಿ ವಿಕೋಪ ನಿರ್ವಹಣೆಗೆ ರಾಜ್ಯಕ್ಕೆ ₹4,659 ಕೋಟಿ ಹಂಚಿಕೆ ಮಾಡಲಾಗಿದೆ. ಬರ ನಿರ್ವಹಣೆಗೆ ಮುಂಗಡ ಹಣ ನೀಡಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT