ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಂಷಾ ನದಿಗೆ ವಿಷಯುಕ್ತ ತ್ಯಾಜ್ಯ

20 ಹಳ್ಳಿಗಳ 30 ಸಾವಿರ ಜನರಿಗೆ ಅಪಾಯ: ಜಿಲ್ಲಾಡಳಿತ ಎಚ್ಚರಿಕೆ
Last Updated 23 ನವೆಂಬರ್ 2018, 19:22 IST
ಅಕ್ಷರ ಗಾತ್ರ

ಮಂಡ್ಯ: ಮದ್ದೂರು ತಾಲ್ಲೂಕು ಕೊಪ್ಪ ಎನ್‌.ಎಸ್‌.ಎಲ್‌ ಸಕ್ಕರೆ ಕಾರ್ಖಾನೆಯ ಡಿಸ್ಟಲರಿ ತ್ಯಾಜ್ಯ ಸಂಗ್ರಹಣ ಘಟಕ ಸ್ಫೋಟದ ಪರಿಣಾಮ ಭೀಕರವಾಗಿದೆ. ವಿಷಯುಕ್ತ ತ್ಯಾಜ್ಯ ಶಿಂಷಾ ನದಿಗೆ ಸೇರಿ 20 ಹಳ್ಳಿಗಳ ಸುಮಾರು 30 ಸಾವಿರ ಜನರಿಗೆ ಅಪಾಯ ಎದುರಾಗಿದ್ದು, ನದಿ ನೀರು ಕುಡಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ನ.20ರ ತಡರಾತ್ರಿ ಸ್ಫೋಟ ಸಂಭವಿಸಿ ತ್ಯಾಜ್ಯವು ಕೃಷಿ ಭೂಮಿ ಹಾಗೂ ನದಿ ಸೇರಿದೆ. ಎರಡು ದಿನಗಳ ನಂತರ ಭತ್ತ, ರಾಗಿ, ಕಬ್ಬು ಬೆಳೆ ಸುಟ್ಟು ಹೋಗಿದೆ. ತ್ಯಾಜ್ಯವು ಶಿಂಷಾ ಒಡಲು ಸೇರಿ ಕುಡಿಯುವ ನೀರು ಕಲುಷಿತಗೊಂಡಿದೆ. ಅಂತರ್ಜಲ ಕೂಡ ಮಲಿನ
ಗೊಳ್ಳುವ ಅಪಾಯ ಎದುರಾಗಿದೆ. ನದಿ ತಟದಲ್ಲಿರುವ ಕೊಕ್ಕೆರೆ ಬೆಳ್ಳೂರಿನ ಪಕ್ಷಿಗಳ ಪ್ರಾಣಕ್ಕೂ ಕುತ್ತು ಬಂದಿದೆ. ಮೀನು ಕೃಷಿ ಮಾಡುತ್ತಿರುವ ಹೊಂಡಗಳಿಗೆ ತ್ಯಾಜ್ಯ ಹರಿದಿದ್ದು ಸಾವಿರಾರು ಮೀನುಗಳು ಸತ್ತಿವೆ.

ಶಿಂಷಾ ನದಿ ನೀರು ರಾಮನಗರ ಜಿಲ್ಲೆಯ ಇಗ್ಗಲೂರು ಜಲಾಶಯ ಸೇರುತ್ತಿದ್ದು ಅಲ್ಲಿಯ ಜನರಿಗೂ ಅಪಾಯ ಎದುರಾಗಿದೆ.

ಶಿಂಷಾ ನದಿ ನೀರು ಮುತ್ತತ್ತಿ ಬಳಿ ಕಾವೇರಿ ನದಿ ಸೇರುತ್ತದೆ. ಇದೇ ನೀರು ಟಿ.ಕೆ.ಹಳ್ಳಿ ಬಳಿಯ ಸಂಸ್ಕರಣಾ ಘಟಕದ ಮೂಲಕ ಬೆಂಗಳೂರು ತಲುಪುತ್ತಿದ್ದು, ಮಲಿನ ನೀರು ಹರಿಯುವ ಆತಂಕ ಸೃಷ್ಟಿಯಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

‘ಘಟಕ ಸ್ಫೋಟಗೊಂಡ ಮೊದಲ ದಿನ ಕೃಷಿ ಭೂಮಿಯಲ್ಲಷ್ಟೇ ತ್ಯಾಜ್ಯ ಹರಿದಿತ್ತು. ಆದರೆ ಬುಧವಾರ, ಗುರುವಾರ ತ್ಯಾಜ್ಯ ತಗ್ಗಹಳ್ಳಿ ಹಾಗೂ ಇಗ್ಗಲೂರು ಜಲಾಶಯದವರೆಗೂ ಸಾಗಿದೆ. ನಾವು ಈಗಾಗಲೇ ನೀರಿನ ಮಾದರಿ ಕಳುಹಿಸಿದ್ದೇವೆ. ನೀರು ಬಳಸದಂತೆ ಜನರಿಗೆ ಎಚ್ಚರಿಕೆ ನೀಡಿದ್ದೇವೆ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಪರಿಸರ ಅಧಿಕಾರಿ ಸವಿತಾ ಹೇಳಿದರು.

ತ್ಯಾಜ್ಯ ಹರಿದಿರುವ ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವ ರೈತರಿಗೆ ಉಸಿರಾಟದ ಸಮಸ್ಯೆ, ನೆಗಡಿ, ತುರಿಕೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಚಿಕ್ಕೋನಹಳ್ಳಿ ಗ್ರಾಮದಲ್ಲಿ ತಾತ್ಕಾಲಿಕ ಆಸ್ಪತ್ರೆ ತೆರೆಯಲಾಗಿದೆ.

ರಾಸಾಯನಿಕ ಸಂಗ್ರಹ: ಹೊರ ಬರದ ಸತ್ಯ

ರಾಸಾಯನಿಕ ತ್ಯಾಜ್ಯಕ್ಕೆ ಘನ ತ್ಯಾಜ್ಯ (ಪ್ರೆಸ್ ಮಡ್) ಬೆರೆಸಿ, ಸಂಸ್ಕರಿಸಿ ಗೊಬ್ಬರ ತಯಾರಿಸಲಾಗುತ್ತದೆ. ಆದರೆ ತ್ಯಾಜ್ಯ ಸಂಸ್ಕರಣೆ ಮಾಡದೆ 1 ಕೋಟಿ ಲೀಟರ್‌ಗಳಷ್ಟು ಸಂಗ್ರಹಿಸಿ ಇಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ಏಕೆ ಅಷ್ಟೊಂದು ತ್ಯಾಜ್ಯ ಸಂಗ್ರಹಿಸಿದ್ದರು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಜಿಲ್ಲಾ ಪರಿಸರ ಅಧಿಕಾರಿ ಸವಿತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT