ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಟುಂಬ ಕಾನೂನು ಮೊದಲು ಸುಧಾರಿಸಿ’

ಏಕೀಕೃತ ರಾಷ್ಟ್ರದಲ್ಲಿ ಏಕರೂಪತೆ ಇರಬೇಕೆಂದೇನೂ ಇಲ್ಲ; ಸೆಕ್ಯುಲರ್‌ ತತ್ವ ಬಹುತ್ವ ವಿರೋಧಿಯಾಗದಿರಲಿ
Last Updated 4 ಸೆಪ್ಟೆಂಬರ್ 2018, 18:47 IST
ಅಕ್ಷರ ಗಾತ್ರ

ಸದ್ಯದ ಸಂದರ್ಭದಲ್ಲಿ ಏಕರೂ‍ಪ ನಾಗರಿಕ ಸಂಹಿತೆ ಅನಗತ್ಯ ಹಾಗೂ ಅನಪೇಕ್ಷಣೀಯ. ಇದು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎಸ್. ಚೌಹಾಣ್ ನೇತೃತ್ವದ ಕಾನೂನು ಆಯೋಗ, ಮೂರು ವರ್ಷಗಳ ಅವಧಿ ಪೂರ್ಣಗೊಳಿಸಿದ ಕಡೆಯ ದಿನ (ಆ.31) ಬಿಡುಗಡೆ ಮಾಡಿದ ‘ಕುಟುಂಬ ಕಾನೂನು ಸುಧಾರಣೆ’ ಕುರಿತ ಸಮಾಲೋಚನಾ ವರದಿಯಲ್ಲಿ ಪ್ರಸ್ತಾಪಿಸಿರುವ ಅಂಶ.

ಹೀಗಾಗಿ, ಏಕರೂಪ ನಾಗರಿಕ ಸಂಹಿತೆಯ ಕುರಿತಾದ ಚರ್ಚೆಗೆ ಮತ್ತೊಮ್ಮೆ ಚಾಲನೆ ಸಿಕ್ಕಿದಂತಾಗಿದೆ. ಏಕರೂಪ ನಾಗರಿಕ ಸಂಹಿತೆ ಬಗ್ಗೆ ಒಮ್ಮತ ಇಲ್ಲದಿರುವ ಸದ್ಯದ ಸಂದರ್ಭದಲ್ಲಿ ವೈಯಕ್ತಿಕ ಕಾನೂನುಗಳ ವೈವಿಧ್ಯ ರಕ್ಷಿಸುವುದೇ ಉತ್ತಮ ಮಾರ್ಗ. ಆದರೆ ವೈಯಕ್ತಿಕ ಕಾನೂನುಗಳು, ಭಾರತ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಗಳಿಗೆ ಆಸ್ಪದ ನೀಡುವಂತಾಗಬಾರದು ಎಂಬಂತಹ ಕಾಳಜಿಯನ್ನೂ ಕಾನೂನು ಆಯೋಗ ವ್ಯಕ್ತಪಡಿಸಿದೆ.

‘ವಿಭಿನ್ನತೆಯ ಅಸ್ತಿತ್ವವೇ ತಾರತಮ್ಯ ಸೂಚಿಸುವುದಿಲ್ಲ. ವಿಭಿನ್ನತೆಗಳನ್ನು ಅರ್ಥಮಾಡಿಕೊಳ್ಳುವತ್ತ ಹೆಚ್ಚಿನ ರಾಷ್ಟ್ರಗಳು ಇತ್ತೀಚಿನ ದಿನಗಳಲ್ಲಿ ಸಾಗುತ್ತಿವೆ.ಇದು ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಸೂಚಕ’ ಎಂಬ ಆಯೋಗದ ಮಾತುಗಳನ್ನು ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿವೇಚಿಸಬೇಕು. ಏಕರೂಪ ನಾಗರಿಕ ಸಂಹಿತೆಯ ಚರ್ಚೆ ಶುರುವಾಗಿ ಬಹಳ ಕಾಲವಾಗಿದೆ.

ಏಕರೂಪ ನಾಗರಿಕ ಸಂಹಿತೆಯನ್ನು ನಾಗರಿಕರಿಗೆ ಒದಗಿಸಿಕೊಡಲು ಪ್ರಭುತ್ವ ಪ್ರಯತ್ನಿಸುತ್ತದೆ ಎಂದು ಸಂವಿಧಾನದ 44ನೇ ವಿಧಿಯಲ್ಲೇ ಹೇಳಲಾಗಿದೆ. ಸಂವಿಧಾನದ 44ನೇ ವಿಧಿ, ರಾಜ್ಯ ನೀತಿಯ ಮಾರ್ಗದರ್ಶಿ ತತ್ವಗಳಲ್ಲಿ ಸೇರಿದೆ. ಕಾನೂನುಗಳನ್ನು ಮಾಡುವಾಗ ಈ ತತ್ವಗಳನ್ನು ಅಳವಡಿಸುವ ಕರ್ತವ್ಯ ಪ್ರಭುತ್ವದ್ದಾಗಿರುತ್ತದೆ ಎಂಬುದನ್ನು ಸಂವಿಧಾನದ 37ನೇ ವಿಧಿ ಸ್ಪಷ್ಟಪಡಿಸುತ್ತದೆ. ಏಕರೂಪ ನಾಗರಿಕ ಸಂಹಿತೆಯನ್ನು ರಾಷ್ಟ್ರದಲ್ಲಿ ಜಾರಿ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವು ವ್ಯಕ್ತಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಸಹ ತಾಕೀತು ಮಾಡಿದೆ.

ಹೀಗಿದ್ದೂ ಏಕರೂಪ ನಾಗರಿಕ ಸಂಹಿತೆ ಎಂಬುದು ರಾಜಕೀಯ ಸೂಕ್ಷ್ಮ ವಿಚಾರವಾಗಿಯೇ ಮುಂದುವರಿಯುತ್ತಿದೆ. ಈಗಂತೂ ಕೇಂದ್ರ ಸರ್ಕಾರದ ನೇತೃತ್ವ ವಹಿಸಿರುವ ಬಿಜೆಪಿ, ಉದ್ದಕ್ಕೂ ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸಿಕೊಂಡೇ ಬಂದಿದೆ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಇರುವ ಮುಖ್ಯ ವಿಚಾರಗಳಲ್ಲಿ ಇದೂ ಒಂದಾಗಿತ್ತು ಎಂಬುದನ್ನು ಗಮನಿಸಬೇಕು.

ಸುಪ್ರೀಂ ಕೋರ್ಟ್ ಚಾಟಿ ಬೀಸಿದ ನಂತರ, ಈ ದಿಸೆಯಲ್ಲಿ ಕೇಂದ್ರ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿತ್ತು. ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ವಿಚಾರಗಳನ್ನು ಆಳವಾದ ಪರಿಶೀಲನೆಗೆ ಒಳಪಡಿಸಬೇಕು ಎಂದು 2016ರ ಜೂನ್‌ನಲ್ಲಿ ಕಾನೂನು ಆಯೋಗಕ್ಕೆಕೇಂದ್ರ ಕಾನೂನು ಸಚಿವಾಲಯ ಕೇಳಿತ್ತು. ‘ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಕಾಲ ಪಕ್ವವಾಗಿದೆಯೇ’ ಎಂಬುದು ಸಚಿವಾಲಯದ ಪ್ರಶ್ನೆಯಾಗಿತ್ತು. ಇದಾದ ನಂತರ 2016ರ ನವೆಂಬರ್‌ನಲ್ಲಿ ಪ್ರಶ್ನಾವಳಿಗಳನ್ನು ಬಿಡುಗಡೆ ಮಾಡಿದ್ದ ಕಾನೂನು ಆಯೋಗ, ಸಾರ್ವಜನಿಕರಿಂದ ಅಭಿಪ್ರಾಯ ಆಹ್ವಾನಿಸಿತ್ತು. ಇಷ್ಟೆಲ್ಲಾ ಕಸರತ್ತುಗಳ ನಂತರ, ಕಾನೂನು ಆಯೋಗ ಬಿಡುಗಡೆ ಮಾಡಿರುವ ಈ ಸಮಾಲೋಚನಾ ವರದಿ, ಸಾಂಸ್ಕೃತಿಕ ವೈವಿಧ್ಯಗಳಿಗೆ ಪ್ರಾಶಸ್ತ್ಯ ನೀಡುತ್ತಿರುವ ಜಗತ್ತಿನ ಆಶಯಗಳನ್ನು ಗಣನೆಗೆ ತೆಗೆದುಕೊಂಡಂತಿದೆ.

‘ಏಕರೂಪ ನಾಗರಿಕ ಸಂಹಿತೆಯ ವಿಚಾರ ವಿಸ್ತೃತವಾದದ್ದು. ಅದರ ಪರಿಣಾಮಗಳ ಸಾಧ್ಯತೆಯನ್ನು ಭಾರತದಲ್ಲಿ ಇನ್ನೂ ಪರೀಕ್ಷಿಸಲಾಗಿಲ್ಲ. ಹೀಗಾಗಿ ವಿಸ್ತೃತವಾದ ಸಂಶೋಧನೆ ಹಾಗೂ ಕಳೆದ ಎರಡು ವರ್ಷಗಳಲ್ಲಿ ನಡೆಸಿದ ಅಸಂಖ್ಯ ಸಮಾಲೋಚನೆಗಳ ನಂತರ ಭಾರತದಲ್ಲಿ ಕುಟುಂಬ ಕಾನೂನುಗಳ ಸುಧಾರಣೆ ಬಗ್ಗೆ ಸಮಾಲೋಚನಾ ವರದಿಯನ್ನು ಮಂಡಿಸಲಾಗುತ್ತಿದೆ’ ಎಂದು ಆಯೋಗ ಹೇಳಿದೆ.

185 ಪುಟಗಳ ಈ ವರದಿ, ಐದು ಅಧ್ಯಾಯಗಳಲ್ಲಿ ವಿವಾಹ, ವಿಚ್ಛೇದನ, ಜೀವನಾಂಶ, ಪೋಷಕತ್ವ, ದತ್ತು ಹಾಗೂ ಉತ್ತರಾಧಿಕಾರದಂತಹ ವಿಚಾರಗಳಲ್ಲಿ ತಾರತಮ್ಯ ನಿವಾರಿಸಲು ತರಬೇಕಾದ ಸುಧಾರಣೆಗಳನ್ನು ಚರ್ಚಿಸಿದೆ.

ಸಂವಿಧಾನದ 13ನೇ ವಿಧಿ ಅನ್ವಯ, ‘ವೈಯಕ್ತಿಕ ಕಾನೂನು’ ಕಾನೂನುಗಳಾಗುತ್ತವೆಯೇ ಇಲ್ಲವೇ, ಅವು ಕಾನೂನುಗಳೇ ಆದಲ್ಲಿ 25-28ನೇ ವಿಧಿಗಳ ಅನ್ವಯ ರಕ್ಷಣೆ ಪಡೆದುಕೊಂಡಿವೆಯೇ ಎಂಬ ವಿಚಾರವನ್ನು ಅನೇಕ ಪ್ರಕರಣಗಳಲ್ಲಿ ಚರ್ಚಿಸಲಾಗಿದೆ ಎಂಬುದನ್ನು ಆಯೋಗ ಹೇಳಿದೆ. ವಿವಿಧ ಬಗೆಯ ಸಂಪ್ರದಾಯ, ಆಚರಣೆಗಳು, ಸಾಮಾಜಿಕ ಕಟ್ಟಪಾಡುಗಳಿರುವ ಭಾರತದಂತಹ ದೇಶದಲ್ಲಿ ಏಕರೂಪ ಕಾನೂನಿಗೆ ಒಮ್ಮತ ಮೂಡಿಸುವುದು ಕಷ್ಟ. ಆದರೆ, ಭಾರತೀಯ ಸಂಸ್ಕೃತಿಯ ವೈವಿಧ್ಯವನ್ನು ಸಂಭ್ರಮಿಸುವುದು ಎಂದರೆ ನಿರ್ದಿಷ್ಟ ಗುಂಪುಗಳ ಹಕ್ಕುಗಳನ್ನು ಮೊಟಕುಗೊಳಿಸುವಂತಾಗಬಾರದು.

‘ಮಹಿಳೆಯ ಸಮಾನತೆಯ ಹಕ್ಕಿಗೆ ಧಕ್ಕೆಯಾಗದಿರುವಂತಹ ಧಾರ್ಮಿಕನಂಬಿಕೆಯ ಸ್ವಾತಂತ್ರ್ಯ ಮಹಿಳೆಗೆ ಇರಬೇಕು’. ಆದರೆ, ಈ ಎರಡರಲ್ಲಿ ಒಂದು ಎಂದು ಆಯ್ಕೆ ಮಾಡಿಕೊಳ್ಳಬೇಕಾದ ಸ್ಥಿತಿ ಮಹಿಳೆಗೆ ಇದ್ದಲ್ಲಿ ಅದು ಸರಿಯಲ್ಲ. ಧಾರ್ಮಿಕ ಕಟ್ಟಳೆಗಳ ಹೆಸರಲ್ಲಿರುವ ಸಾಮಾಜಿಕ ಪಿಡುಗುಗಳು ಎಂದು ಉದಾಹರಣೆಗಳಾಗಿ ಸತಿ, ದೇವದಾಸಿ, ತ್ರಿವಳಿ ತಲಾಖ್ ಹಾಗೂ ಬಾಲ್ಯ ವಿವಾಹವನ್ನು ಆಯೋಗ ಉದಾಹರಿಸಿದೆ.

‘ಈ ಆಚರಣೆಗಳು ಮಾನವ ಹಕ್ಕುಗಳ ಮೂಲ ಸಿದ್ಧಾಂತಗಳಿಗೆ ಬದ್ಧವಾಗುವುದಿಲ್ಲ. ಅಥವಾ ಇವು ಧರ್ಮಕ್ಕೆ ಅಗತ್ಯವಾದವುಗಳೂ ಅಲ್ಲ’ ಎಂದೂ ಅಭಿಪ್ರಾಯಪಡಲಾಗಿದೆ. ಇಂತಹ ಸನ್ನಿವೇಶದಲ್ಲಿ ‘ಕುಟುಂಬಕ್ಕೆ ಸಂಬಂಧಿಸಿದ ಎಲ್ಲಾ ವೈಯಕ್ತಿಕ ಕಾನೂನುಗಳನ್ನು ಮೊದಲು ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಸಂಹಿತೆ ರೂಪದಲ್ಲಿ ಕ್ರೋಡೀಕರಿಸಬೇಕು. ಸಂಹಿತೆ ರೂಪದಲ್ಲಿ ಕ್ರೋಡೀಕರಿಸಲಾದ ನಾಗರಿಕ ಕಾನೂನಿನ ಒಳಗೆ ನುಸುಳಿದ ಅಸಮಾನತೆಯನ್ನು ತಿದ್ದುಪಡಿ ಮೂಲಕ ಸರಿಪಡಿಸಬೇಕು’ ಎಂದೂ ಆಯೋಗ ಶಿಫಾರಸು ಮಾಡಿದೆ. ಮಹಿಳೆ ಹಾಗೂ ಮಕ್ಕಳ ಹಿತ ಕಾಯದ ಎಲ್ಲಾ ಧರ್ಮಗಳ ವೈಯಕ್ತಿಕ ಕಾನೂನುಗಳು ಹಾಗೆಯೇ ಸೆಕ್ಯುಲರ್ ಕಾನೂನುಗಳಲ್ಲಿಯೂ ಸುಧಾರಣೆಗಳನ್ನು ತರಬೇಕೆಂದು ಹೇಳಲಾಗಿದೆ.

‘ವಿಶೇಷ ವಿವಾಹ ಕಾಯ್ದೆ 1954ರಂತಹ ಸೆಕ್ಯುಲರ್‌ ಕಾನೂನುಗಳಲ್ಲೂ ದೋಷಗಳಿವೆ. ಎಂದರೆ ಧರ್ಮ ನಿರಪೇಕ್ಷ ಕಾನೂನುಗಳೂ ನ್ಯಾಯವನ್ನು ನೇರವಾಗಿ ಒದಗಿಸುತ್ತವೆ ಎಂದು ಹೇಳಲಾಗದು’ ಎಂಬ ತರ್ಕವನ್ನೂ ಆಯೋಗ ಮುಂದಿಟ್ಟಿದೆ.

ಸಮುದಾಯಗಳ ನಡುವೆ ಸಮಾನತೆ ತರುವ ಬದಲಿಗೆ ಸಮುದಾಯಗಳೊಳಗೆಯೇ ಪುರುಷ ಹಾಗೂ ಮಹಿಳೆ ಮಧ್ಯೆ ಸಮಾನತೆ ತರುವ ಆಶಯ ಇಲ್ಲಿ ಮುಖ್ಯವಾದದ್ದು. ಪುರುಷ ಹಾಗೂ ಮಹಿಳೆಯ ಮಧ್ಯೆ ತಾರತಮ್ಯ ಮಾಡುವ ಕಾನೂನುಗಳನ್ನು ನಿರ್ವಹಿಸಬೇಕಾದದ್ದು ಆದ್ಯತೆಯಾಗಬೇಕು ಎಂದು ಆಯೋಗ ಒತ್ತಿ ಹೇಳಿದೆ. ಪಾರ್ಸಿಗಳಲ್ಲಿ ಉತ್ತರಾಧಿಕಾರದ ಹಕ್ಕುಗಳನ್ನು ನಿರ್ವಹಿಸುವ 1925ರ ಭಾರತೀಯ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್‍ಗಳಿಗೆ ಸಂಬಂಧಿಸಿದಂತೆ ಆಯೋಗ ಹೇಳಿರುವ ಮಾತುಗಳು ಮಹತ್ವದ್ದು: ‘ತನ್ನ ಸಮುದಾಯದಿಂದ ಹೊರಗಿನವರನ್ನು ವಿವಾಹವಾಗಿದ್ದರೂ ಪಾರ್ಸಿ ಮಹಿಳೆಯು ತನ್ನ ಪಾರ್ಸಿ ಅಸ್ಮಿತೆಯನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು. ಆಕೆಯ ಮಕ್ಕಳು, ತಂದೆಯ ಧರ್ಮವನ್ನು ಅನುಸರಿಸದೆ ಝೊರೊಸ್ಟ್ರಿಯನಿಸಂ ಆಯ್ಕೆ ಮಾಡಿಕೊಂಡಲ್ಲಿ ಆ ಮಕ್ಕಳಿಗೂ ಉತ್ತರಾಧಿಕಾರಿಗಳಾಗಲು ಅವಕಾಶ ನೀಡಬೇಕು.’

ಹಿಂದೂ ವೈಯಕ್ತಿಕ ಕಾನೂನಿಗೆ ಸಂಬಂಧಿಸಿದಂತೆ ಮಾಡಲಾಗಿರುವ ಬಹು ಮುಖ್ಯ ಶಿಫಾರಸು ಎಂದರೆ ಹಿಂದೂ ಅವಿಭಜಿತ ಕುಟುಂಬದ ರದ್ದು. ಇದನ್ನು ಕೇವಲ ತೆರಿಗೆ ತಪ್ಪಿಸಲು ಬಳಸಲಾಗುತ್ತಿದೆ ಎಂದು ಈ ವರದಿ ಹೇಳುತ್ತದೆ. ಜಂಟಿ ಉತ್ತರಾಧಿಕಾರವನ್ನು ರದ್ದು ಮಾಡಬೇಕು. ಹೀಗಾದಾಗ ಹಿಂದೂ ಅವಿಭಜಿತ ಕುಟುಂಬ ಅನಿವಾರ್ಯವಾಗಿ ಕುಸಿಯುತ್ತದೆ. ‘ಅತಿಯಾದ ಭಾವುಕತೆಯ ನೆಲೆಯಲ್ಲಿ ಈ ವ್ಯವಸ್ಥೆ ಸಮರ್ಥಿಸಿಕೊಳ್ಳುವ ಮೂಲಕ ರಾಷ್ಟ್ರದ ವರಮಾನಕ್ಕೆ ನಷ್ಟ ಉಂಟು ಮಾಡುವುದು ನ್ಯಾಯಸಮ್ಮತವಲ್ಲ ಎಂಬುದನ್ನು ಅರಿತುಕೊಳ್ಳಲು ಇದು ಸಕಾಲ’ ಎಂದು ಆಯೋಗ ವಿವರಿಸಿದೆ.

ಹಿಂದೂ ಕಾನೂನುಗಳಲ್ಲಿ ಸುಧಾರಣೆಗಾಗಿ ಸೂಚಿಸಿರುವ ಇನ್ನಷ್ಟು ವಿಷಯಗಳು ಇವು: ಒಟ್ಟಿಗೆ ಬದುಕಲು ಪತ್ನಿಯನ್ನು ಬಲಾತ್ಕರಿಸುವಂತಹ ದಾಂಪತ್ಯ ಹಕ್ಕುಗಳ ಪುನರ್‌ಸ್ಥಾಪನೆಗೆ ಇರುವ ಅವಕಾಶ ಕಿತ್ತು ಹಾಕಬೇಕು ಲಿವ್‍ಇನ್ ಸಂಬಂಧಗಳಲ್ಲಿ ಹುಟ್ಟಿದ ಮಕ್ಕಳಿಗೆ ಕಾನೂನು ಮಾನ್ಯತೆ ಹಾಗೂ ಉತ್ತರಾಧಿಕಾರದ ಹಕ್ಕು ದೊರಕಿಸಿಕೊಡಲು ಹೊಸ ಕಾನೂನು ತರಬೇಕು.

ಬಹುಪತ್ನಿತ್ವ, ನಿಕಾ ಹಲಾಲ, ವ್ಯಭಿಚಾರ ಕಾನೂನುಗಳು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಳಪಟ್ಟಿರುವುದರಿಂದ, ಈ ಕುರಿತಾದ ಸುಧಾರಣೆಗಳನ್ನು ಬರೀ ಚರ್ಚಿಸಲಾಗಿದೆ. ಯಾವುದೇ ಶಿಫಾರಸುಗಳನ್ನು ಕಾನೂನು ಆಯೋಗ ಮಾಡಿಲ್ಲ. ‘ಇಸ್ಲಾಮ್‌ನಲ್ಲಿ ಬಹುಪತ್ನಿತ್ವಕ್ಕೆ ಅವಕಾಶ ಇದ್ದರೂ ಭಾರತೀಯ ಮುಸ್ಲಿಮರಲ್ಲಿ ಈ ಆಚರಣೆ ಅಪರೂಪದ್ದು. ಬದಲಿಗೆ ಮತ್ತೊಂದು ವಿವಾಹ ಮಾಡಿಕೊಳ್ಳಲು ಮುಸ್ಲಿಮರಾಗಿ ಮತಾಂತರಗೊಂಡು ಇತರ ಧರ್ಮದವರು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿ
ದ್ದಾರೆ’ ಎಂದು ಈ ವರದಿ ಹೇಳಿದೆ.

‘ಬಹುಪತ್ನಿತ್ವ ಕ್ರಿಮಿನಲ್ ಅಪರಾಧ ಎಂಬುದನ್ನು ಸ್ಪಷ್ಟಪಡಿಸಬೇಕು. ಏಕಪತ್ನಿತ್ವ ಕುರಿತಾದ ನೈತಿಕ ನಿಲುವನ್ನು ಆಧರಿಸಿಲ್ಲ ಈ ನಿಲುವು. ಬದಲಿಗೆ ಪುರುಷರಿಗೇ ಮೀಸಲಾದ ಪ್ರತಿಷ್ಠೆಯಾಗಿ ಇದನ್ನು ಬಳಸುತ್ತಿರುವ ವಾಸ್ತವತೆಯನ್ನು ಆಧರಿಸಿದೆ’ ಎಂದು ಕಾನೂನು ಆಯೋಗ ಹೇಳಿದೆ.

2001ರಲ್ಲಿ ಕ್ರೈಸ್ತ ವಿವಾಹ ಹಾಗೂ ವಿಚ್ಛೇದನ ಕಾನೂನುಗಳಿಗೆ ತಿದ್ದುಪಡಿ ತಂದ ನಂತರವೂ, ಕಾಲಾನುಕಾಲದಿಂದ ಕ್ಯಾಥೊಲಿಕ್‌ ಸಮುದಾಯವು ವಿಚ್ಛೇದನದ ಪರ ಇಲ್ಲದಿರುವುದರಿಂದ ವಿಚ್ಛೇದನಕ್ಕೆ ಮೊದಲು ಕ್ರೈಸ್ತ ದಂಪತಿ 2ವರ್ಷ ಪ್ರತ್ಯೇಕವಾಗಿ ವಾಸಿಸಬೇಕೆಂಬ ನಿಯಮ ಉಳಿಸಿಕೊಳ್ಳಲಾಗಿದೆ ಎಂಬುದನ್ನೂ ಈ ವರದಿ ಎತ್ತಿ ಹೇಳಿದೆ ಇತರ ಧರ್ಮದವರಿಗೆ ಈ ಅವಧಿ ಕಡಿಮೆ ಇದೆ ಎಂಬಂತಹ ಕ್ರೈಸ್ತ ಮಹಿಳೆಯರ ವಾದಗಳನ್ನು ಆಧರಿಸಿ ಈ ವಿಚಾರವನ್ನು 1954ರ ವಿಶೇಷ ವಿವಾಹ ಕಾಯ್ದೆಯಲ್ಲಿರುವ ಅಂಶಗಳಿಗೆ ಅನುಸಾರವಾಗಿ ತರಬೇಕು ಎಂದು ಆಯೋಗ ಹೇಳಿದೆ. ವಿಶೇಷ ವಿವಾಹ ಕಾಯ್ದೆಯ ಲೋಪಗಳನ್ನೂ ತೋರಿಸಿಕೊಡಲಾಗಿದೆ. ವಿವಾಹ ನೊಂದಾವಣೆಗೆ 30 ದಿನಗಳ ನೋಟಿಸ್ ಅವಧಿ, ಅಂತರಜಾತಿ ಅಥವಾ ಅಂತರ ಧರ್ಮೀಯ ಮದುವೆಯನ್ನು ಸಂಬಂಧಿಕರು ತಡೆಯಲು ಅವಕಾಶ ಒದಗಿಸಿಕೊಟ್ಟಂತೆ ಎಂದು ಆಯೋಗ ಟೀಕಿಸಿದೆ.

ಆಯೋಗದ ಮತ್ತಿತರ ಮುಖ್ಯ ಶಿಫಾರಸುಗಳಲ್ಲಿ ಕಡ್ಡಾಯ ವಿವಾಹ ನೊಂದಾವಣೆಯೂ ಒಂದು. ಹಾಗೆಯೇವಿವಾಹಕ್ಕೆ ಅರ್ಹ ವಯಸ್ಸು ನಿಗದಿಯಲ್ಲಿ ಯಾವುದೇ ಲಿಂಗಭೇದ ಇರಬಾರದು. ಹೆಣ್ಣುಮಕ್ಕಳಿಗೆ 18 ಹಾಗೂ ಗಂಡುಮಕ್ಕಳಿಗೆ 21, ಮದುವೆಗೆ ಅರ್ಹ ವಯಸ್ಸು ಎಂಬುದು ಪತಿಗಿಂತ ಪತ್ನಿ ಚಿಕ್ಕವಳಿರಬೇಕು ಎಂಬಂಥ ಯಥಾಸ್ಥಿತಿವಾದದ ಪ್ರತೀಕ ಎಂದು ಆಯೋಗ ಹೇಳಿದೆ.

ವಿಚ್ಛೇದನಕ್ಕಾಗಿ ಸಂಗಾತಿ ಮೇಲೆ ಯಾವುದೇ ದೋಷ ಹೊರಿಸದಿರುವಂತಹ (ನೋ ಫಾಲ್ಟ್‌) ಹೊಸ ನೆಲೆಗಳಿಗೆ ಅವಕಾಶ ಹಾಗೂ ಸರಿಪಡಿಸಲಾಗದ ಒಡಕು ಮೂಡಿದ ದಾಂಪತ್ಯ ಬದುಕು ಕೊನೆಗಾಣಿಸಿಕೊಳ್ಳಲು ಅವಕಾಶವನ್ನೂ ಆಯೋಗದ ಈ ವರದಿ ಚರ್ಚೆಗೆ ತೆರೆದಿಟ್ಟಿದೆ. ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳಿಗೆ ದತ್ತು ತೆಗೆದುಕೊಳ್ಳಲು ಅವಕಾಶ ಹಾಗೂ ಪೋಷಕತ್ವ ವಿಚಾರಗಳಲ್ಲಿ ಮಗುವಿನ ಹಿತಾಸಕ್ತಿಗೆ ಹೆಚ್ಚಿನ ಗಮನ ನೀಡುವಂತಹ ವಿಚಾರವೂ ಇಲ್ಲಿ ಪ್ರಸ್ತಾಪವಾಗಿದೆ.

ಸೆಕ್ಯುಲರ್‌ ತತ್ವ ಬಹುತ್ವಕ್ಕೆ ವಿರೋಧಿಯಾಗಬಾರದು. ಸಾಂಸ್ಕೃತಿಕ ವಿಭಿನ್ನತೆಗಳ ಶಾಂತಿಯುತ ಸಹಬಾಳ್ವೆಗೆ ಇಲ್ಲಿ ಅವಕಾಶ ಇರಬೇಕು. ಆದಿವಾಸಿ ಅಥವಾ ಬುಡಕಟ್ಟು ಜನಾಂಗಗಳ ಸಂಪ್ರದಾಯ, ಆಚರಣೆಗಳೂ ಲಿಂಗತ್ವ ಸಮಾನತೆ ನೀತಿಯ ಪಾಠ ಹೇಳುವಂತಿವೆ ಎಂಬಂಥ ಅಭಿಪ್ರಾಯವನ್ನೂ ಆಯೋಗ ವ್ಯಕ್ತಪಡಿಸಿದೆ. ಭಾರತದಲ್ಲಿ ಸೆಕ್ಯುಲರ್‌ ತತ್ವವನ್ನು ಆಯೋಗ ವ್ಯಾಖ್ಯಾನಿಸಿರುವ ರೀತಿ ಇದು: ವಿಭಿನ್ನ ಜನರ ವಿಭಿನ್ನ ಭಾಷೆ, ವಿಭಿನ್ನ ನಂಬಿಕೆಗಳ ಗುರುತಿಸುವಿಕೆ ಹಾಗೂ ರಕ್ಷಣೆ. ಜೊತೆಗೆ ಏಕೀಕೃತ ಭಾರತ ನಿರ್ಮಾಣಕ್ಕೆ ಅವರನ್ನೆಲ್ಲಾ ಒಟ್ಟಾಗಿಸುವುದು. ಹೀಗಾಗಿ ಏಕೀಕೃತ ರಾಷ್ಟ್ರದಲ್ಲಿ ಏಕರೂಪತೆ ಇರಬೇಕೆಂದೇನೂ ಇಲ್ಲ. ಮಾನವಹಕ್ಕುಗಳ ಕುರಿತಾದ ಕೆಲವೊಂದು ಸಾರ್ವತ್ರಿಕವಾದ ವಾದಗಳ ಜೊತೆಗೇ ಈ ವೈವಿಧ್ಯ ಸಂವಾದಿಯಾಗಿರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT